ಮೋದಿ ರ‍್ಯಾಲಿಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸಿದ್ಧತೆ- 60 ಸಾವಿರ ಆಸನ ವ್ಯವಸ್ಥೆ

Public TV
2 Min Read

ಹುಬ್ಬಳ್ಳಿ: ನಗರ ಹೊರವಲಯದ ಗಬ್ಬೂರು ಬಳಿಯ ಕೆಎಲ್‍ಇ ಮೈದಾನದಲ್ಲಿ ಭಾನುವಾರ ನಡೆಯುವ ಬಿಜೆಪಿಯ ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ.

ಕೆಎಲ್‍ಇ ಮೈದಾನದ 65 ಎಕರೆ ಜಾಗವನ್ನು ಈಗಾಗಲೇ ಜೆಸಿಬಿಗಳಿಂದ ಸ್ವಚ್ಛಗೊಳಿಸಲಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರ ಕಾರುಗಳು ಹುಬ್ಬಳ್ಳಿಯ ರೈಲ್ವೇ ನಿಲ್ದಾಣಕ್ಕೆ ಬಂದಿವೆ. ಸಮಾವೇಶದ ತಯಾರಿ ಮತ್ತು ಕಣ್ಗಾವಲಿಗೆ ವಿಶೇಷ ಭದ್ರತಾ ಪಡೆ ಈಗಾಗಲೇ ನಗರಕ್ಕೆ ಆಗಮಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕುಳಿತುಕೊಳ್ಳಲು ಪ್ರಧಾನ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಪ್ರಧಾನ ವೇದಿಕೆಯ ಪಕ್ಕದಲ್ಲಿ ಶಾಸಕರು ಮತ್ತು ಸಂಸದರಿಗಾಗಿ ಮತ್ತೊಂದು ವೇದಿಕೆ ಸಜ್ಜಾಗುತ್ತಿದೆ. 90 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಧಾರವಾಡ, ಹಾವೇರಿ, ಗದಗ, ಬೆಳಗಾವಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಸೇರಲಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಲ್ಹಾದ್ ಜೋಶಿ ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಬಿಜೆಪಿ ಸಮಾವೇಶ ಅಭೂತಪೂರ್ವ ಯಶಸ್ವಿಯಾಗಲಿದೆ. ಕೇಂದ್ರ ಬಜೆಟ್‍ಗೆ ದೇಶಾದ್ಯಂತ ಪೂರಕವಾದ ಬೆಂಬಲ ಸಿಗುತ್ತಿದೆ. ರಾಜ್ಯದ ಜನರು ಪ್ರಧಾನಿಗಳ ಆಗಮನಕ್ಕೆ ಕಾತುರತೆಯಿಂದ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಐಐಟಿ ಕಟ್ಟಡದ ಶಂಕುಸ್ಥಾಪನೆ. ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕಕ್ಕೆ ಚಾಲನೆ, ನ್ಯಾಚುರಲ್ ಗ್ಯಾಸ್ ಔಟ್ಲೆಟ್ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ಲೋಕಾರ್ಪಣೆ. ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕಿಮ್ಸ್ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ನಂತರ ಬಿಜೆಪಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಮಾವೇಶದ ಆಯೋಜಕರು ತಿಳಿಸಿದ್ದಾರೆ.

ನಾಳೆ ನಡೆಯುವ ಸಮಾವೇಶಕ್ಕೆ 5 ಸಾವಿರ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಹೀಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎಮ್ ಎನ್ ನಾಗರಾಜ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *