ಪಾಕಿಸ್ತಾನ ಪರ ಘೋಷಣೆ ಕೂಗಿದವರ ಬಿಡುಗಡೆ – ಬಿಜೆಪಿ ವಿರುದ್ಧ ‘ಕೈ’ ನಾಯಕರ ಕಿಡಿ

Public TV
2 Min Read

ಬೆಂಗಳೂರು : ಹುಬ್ಬಳ್ಳಿಯ ಕೆ.ಎಲ್.ಇ ಕಾಲೇಜ್ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ದೇಶದ್ರೋಹದ ಕೇಸ್ ಅಡಿ ಶನಿವಾರ ಆರೋಪಿಗಳನ್ನ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು. ಆದರೆ ಇಂದು ಆರೋಪಿಗಳನ್ನ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಈ ವರ್ತನೆಗೆ ವಿಪಕ್ಷ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಸರ್ಕಾರ ತಾರತಮ್ಯ ಮಾಡುತ್ತಿದೆ. ಪಾಕಿಸ್ತಾನದ ಪರ ಘೋಷಣೆ ಕೂಗೋದು ದೇಶ ದ್ರೋಹದ ಕೆಲಸ. ಅವರ ಮೇಲೆ ದೇಶ ದ್ರೋಹದ ಕೇಸ್ ಹಾಕಬೇಕು. ಅದನ್ನ ಬಿಟ್ಟು ಬೀದರ್ ಕೇಸ್ ನಲ್ಲಿ ಸುಮ್ಮನೆ ದೇಶದ್ರೋಹಿ ಕೇಸ್ ಹಾಕಿದ್ದಾರೆ. ಈ ಸರ್ಕಾರ ಒಬ್ಬರ ಮೇಲೆ ಒಂದೊಂದು ತರಹ ಕೇಸ್ ಹಾಕಿ ತಾರತಮ್ಯ ಕೆಲಸ ಮಾಡ್ತಿದೆ ಅಂತ ಕಿಡಿಕಾರಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ಮೊದಲು ರಾಜ್ಯ ಪೊಲೀಸರು ದಕ್ಷರಾಗಿದ್ದರು. ಆದ್ರೆ ಈಗ ಪೊಲೀಸ್ ಇಲಾಖೆಯಲ್ಲೂ ರಾಜಕೀಯ ಹೊಕ್ಕಿದೆ. ದೇಶದ್ರೋಹ ಆರೋಪ ಇರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ಯಾಕೆ? ಪೊಲೀಸರ ನಡೆ ಅನುಮಾನ ಮೂಡಿಸುತ್ತಿದೆ ಅಂತ ತಿಳಿಸಿದರು. ಪೊಲೀಸರು ಬಿಜೆಪಿ ಪಕ್ಷದ ಸೂಚನೆ ಪ್ರಕಾರ ಕೆಲಸ ಮಾಡ್ತಿದ್ದಾರೆ. ಯಾರ ಮೇಲೆ ಕೇಸು ದಾಖಲಿಸುವುದು ಅಗತ್ಯವಿಲ್ಲವೋ ಅವರ ಮೇಲೆ ಪ್ರಕರಣ ಹಾಕ್ತಾರೆ. ಆದರೆ ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಬಿಟ್ಟು ಕಳಿಸ್ತಾರೆ ಅಂದ್ರೆ ಏನರ್ಥ ಅಂತ ಪ್ರಶ್ನೆ ಮಾಡಿದರು.

ಅನಂತ್ ಕುಮಾರ್ ಹೆಗಡೆ, ಸೋಮಶೇಖರ್ ರೆಡ್ಡಿ, ಸಿಟಿ ರವಿ ಇಂಥವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಹಾತ್ಮಾ ಗಾಂಧಿ ವಿರುದ್ಧ ಮಾತನಾಡಿದರೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ತನಿಖೆ ಮಾಡದೇ ಬಿಟ್ಟಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಣ್ಣಪುಟ್ಟ ಒತ್ತಡಗಳು ಸಹಜವಾಗಿ ಇರುತ್ತವೆ. ಆದರೆ ಬಿಜೆಪಿ ಸರ್ಕಾರದಲ್ಲಿ ಇದು ಮಾತ್ರ ವಿಪರೀತವಾಗಿದೆ ಅಂತ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.

ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕಳೆದ ಎರಡು ತಿಂಗಳಿಂದ ಬೇರೆ ಬೇರೆ ಘಟನೆಗಳು ನಡೆಯುತ್ತಿವೆ. ಜನರು ಶಾಂತಿಯಾಗಿ, ಸೌಹಾರ್ದವಾಗಿ ಇರಬೇಕು ಅನ್ನೋದು ಈ ಸರ್ಕಾರಕ್ಕೆ ಇಷ್ಟ ಇಲ್ಲದಂತೆ ಕಾಣುತ್ತಿದೆ. ಹೀಗಾಗಿ ಹೀಗೆಲ್ಲ ನಡೆದುಕೊಳ್ತಿದೆ ಅಂತ ಕಿಡಿಕಾರಿದರು. ಪೊಲೀಸ್ ಇಲಾಖೆ ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಇರಬೇಕು. ವರ್ಗಾವಣೆ ಆಗ್ತಾರೆ ಅಂತ ಪೊಲೀಸರು ಒಬ್ಬರಿಗೆ ಒಂದೊಂದು ಕಾನೂನು ಮಾಡೋದು ಸರಿಯಲ್ಲ. ಜನರಿಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹೋಗ್ತಿದೆ. ಡಿಜಿ ಐಜಿ ಅವರ ಗಮನಕ್ಕೆ ತಾರದೇ ಎಸ್ ಪಿ ನಿರ್ಧಾರ ಮಾಡೋಕೆ ಆಗೋದಿಲ್ಲ. ಡಿಜಿ ಐಜಿ ಈ ಬಗ್ಗೆ ಉತ್ತರ ಕೊಡಬೇಕು ಅಂತ ಒತ್ತಾಯ ಮಾಡಿದರು. ಪೊಲೀಸರು ಬಿಜೆಪಿ ಕೈಗೊಂಬೆಯಂತೆ ಕೆಲಸ ಮಾಡೋದು ಬಿಡಬೇಕು. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡಬೇಕು ಅಂತ ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *