ಹಾಡಹಗಲೇ ಜೆಡಿಎಸ್ ಕಾರ್ಯಕರ್ತನಿಗೆ 6 ಬಾರಿ ಚಾಕು ಇರಿದ ಯುವಕರು

Public TV
1 Min Read

ಹುಬ್ಬಳ್ಳಿ: ಹಾಡಹಗಲೇ ಜೆಡಿಎಸ್ ಕಾರ್ಯಕರ್ತನಿಗೆ ಸುಮಾರು ಆರು ಬಾರಿ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಲೋಕಪ್ಪನ ಹಕ್ಕಲ್‍ದಲ್ಲಿ ನಡೆದಿದೆ.

ಹುಬ್ಬಳ್ಳಿಯ ಲೋಕಪ್ಪನ ಹಕ್ಕಲ್‍ದ ನಿವಾಸಿ ಸುಭಾಷ್ ಮಲ್ಲೇಶಪ್ಪ (25) ಚಾಕು ಇರಿತಕ್ಕೆ ಒಳಗಾದ ಜೆಡಿಎಸ್ ಕಾರ್ಯಕರ್ತ. ವಿದ್ಯಾನಗರದ ನಿವಾಸಿ ಪುರುಷೋತ್ತಮ್ ತೆನಿಗೊಂಡ (28) ಸೇರಿದಂತೆ ಮೂವರು ಈ ಕೃತ್ಯ ಎಸಗಿದ್ದಾರೆ. ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ.

ಸುಭಾಷ್ ಮಲ್ಲೇಶಪ್ಪ ಪುರುಷೋತ್ತಮ್‍ನಿಂದ ಸಾಲ ಪಡೆದು ಬೇರಯವರಿಗೆ ಕೊಡಿಸಿದ್ದ. ಆದರೆ ಸಾಲ ಪಡೆದಿದ್ದ ವ್ಯಕ್ತಿ ಹಣವನ್ನು ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಸಾಲಕ್ಕೆ ಜಾಮೀನು ನೀಡಿದ್ದ ಸುಭಾಷ್ ಹಾಗೂ ಸಾಲ ಕೊಟ್ಟಿದ್ದ ಪುರುಷೋತ್ತಮ್ ಜಗಳವಾಡಿದ್ದರು. ಆದರೆ ಇಂದು ಸಾಲದ ವಿಚಾರವಾಗಿ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದ್ದು, ಪುರುಷೋತ್ತಮ್ ಹಾಗೂ ಆತನ ಜೊತೆಗಿದ್ದ ಇಬ್ಬರು ಸುಭಾಷ್‍ಗೆ ಚಾಕುವಿನಿಂದ ಇರಿದಿದ್ದಾರೆ.

ಈ ಘಟನೆಯಲ್ಲಿ ಸುಭಾಷ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಆಯುಕ್ತ ದಿಲೀಪ್ ಅವರು ಪರಿಶೀಲನೆ ನಡೆಸಿದರು. ಬಳಿಕ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೆ ಒಳಗಾದ ಸುಭಾಷ್ ಹಾಗೂ ಕುಟುಂಬಸ್ಥರಿಂದ ಹೇಳಿಕೆ ಪಡೆದಿದ್ದಾರೆ.

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಯಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *