ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕಂಗೆಟ್ಟ ಹುಬ್ಬಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ

Public TV
1 Min Read

ಹುಬ್ಬಳ್ಳಿ: ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ ಕಂಗೆಟ್ಟು ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿರಂತರವಾಗಿ ಫೋನ್ ಮಾಡಿ ವಿಮಾನ ನಿಲ್ದಾಣ ಉಡಾಯಿಸುವ ಬೆದರಿಕೆ ಹಾಕುತ್ತಿದ್ದಾನೆ.

ಇಂದು ಪ್ರಧಾನಿ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯ ಬೆದರಿಕೆ ಕರೆಗೆ ಭದ್ರತಾ ಸಿಬ್ಬಂದಿಗೆ ಆತಂಕ ಹೆಚ್ಚಿಸಿತ್ತು.

ಏನಿದು ಹುಚ್ಚಾಟ:
ರಾಯ್ ಪ್ರೇಯಸಿ ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ರಾಯ್ ಕಾಟ ತಾಳಲಾರದೇ ಯುವತಿ ಗೋವಾದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆಗೊಂಡು ಬಂದಿದ್ದಾರೆ. ಆಗಿನಿಂದ ರಾಯ್‍ನ ಹುಚ್ಚಾಟ ತಪ್ಪಿಲ್ಲ. ರಾಯ್ ಈಗ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ತನ್ನ ಮಾಜಿ ಪ್ರೇಯಸಿಗಾಗಿ ಕರೆ ಮಾಡಿ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾನೆ.

ಲವ್ ಬ್ರೇಕ್ ಆದ ಹಿನ್ನೆಲೆಯಲ್ಲಿ ಕರೆ ಮಾಡುತ್ತಿರುವ ರಾಯ್ ಡಿಯಾಸ್, ಏರ್ ಟ್ರಾಫಿಕ್ ಕಂಟ್ರೋಲ್ ರೂಮಿಗೂ ಕರೆ ಮಾಡುತ್ತಿದ್ದಾನೆ. ಇದರಿಂದ ಕಿರಿಕಿರಿಗೊಳಗಾದ ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲ್ ನಂಬರ್ ಬದಲಿಸಿದ್ದಾರೆ. ಆದರೆ ಹೇಗೋ ಮತ್ತೆ ನಂಬರ್ ತೆಗೆದುಕೊಂಡು ರಾಯ್ ಕರೆ ಮಾಡುತ್ತಿದ್ದಾನೆ.

ಗೋವಾ ಮೂಲದ ರಾಯ್ ಡಿಯಾಸ್ ಕಳೆದ 2 ವರ್ಷದಿಂದ ಪ್ರತಿದಿನ ಕರೆ ಮಾಡುತ್ತಾನೆ. ದುಬೈನಿಂದ ಇಂಟರ್ ನೆಟ್ ಕರೆ ಅಲ್ಲದೆ ಬೇರೆ ಬೇರೆ ನಂಬರ್ ನಿಂದ ಕರೆ ಮಾಡಿ ತನ್ನ ಪ್ರೇಯಸಿಗೆ ಫೋನ್ ಕೊಡುವಂತೆ ತೊಂದರೆ ಕೊಡುತ್ತಿದ್ದಾನೆ.

ರಾಯ್ ಕರೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಸಿಬ್ಬಂದಿ ಫೋನ್ ಎಂಗೇಜ್ ಆಗಿರುವ ಹಿನ್ನೆಲೆಯಲ್ಲಿ ಹಲವು ಸಾರಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಅಕ್ಟೋಬರ್ 6, 2018 ರಂದು ಗೋಕುಲ್ ಠಾಣೆ ಹಾಗೂ ಆಗಷ್ಟ್ 14, 2018ರಂದು ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *