ಡಿಕೆಶಿ ಸಿಎಂ; ರಾಹುಲ್‌ ಅಭಯ : ಕಾಂಗ್ರೆಸ್‌ ಇನ್‌ಸೈಡ್‌ ಸುದ್ದಿ ರಿವೀಲ್‌ ಮಾಡಿದ ಅಮಿತ್‌ ಶಾ

Public TV
2 Min Read

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬಂದರೆ ನೀವೇ ಮುಖ್ಯಮಂತ್ರಿ ಆಗುತ್ತೀರಿ ಎಂಬುದಾಗಿ ಡಿಕೆ ಶಿವಕುಮಾರ್‌ಗೆ (DK Shivakumar) ರಾಹುಲ್‌ ಗಾಂಧಿ (Rahul Gandhi) ಅಭಯ ನೀಡಿರುವ ಸ್ಫೋಟಕ ವಿಚಾರವನ್ನು ಗೃಹ ಸಚಿವ ಅಮಿತ್‌ ಶಾ (Amit Shah) ಬಹಿರಂಗ ಪಡಿಸಿದ್ದಾರೆ.

ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌.ಆರ್‌.ರಂಗನಾಥ್‌ (HR HR Ranganath) ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗುವುದಿಲ್ಲ.‌ ನನಗೆ ಬಂದಿರುವ ಮಾಹಿತಿ ಪ್ರಕಾರ ರಾಹುಲ್‌ ಗಾಂಧಿ (Rahul Gandhi) ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ನೀವೇ ಕರ್ನಾಟಕದ ಮುಖ್ಯಮಂತ್ರಿ (Karnataka Chief Minister) ಎಂದು ಸೂಚನೆ ಕೊಟ್ಟಿದ್ದಾರೆ. ಈ ವಿಚಾರ ಸಿದ್ದರಾಮಯ್ಯನವರಿಗೂ ಗೊತ್ತಿದೆ. ಈ ವಿಷಯ ತಿಳಿದು ಸಿದ್ದರಾಮಯ್ಯ ಮತ್ತು ಕುರುಬರು ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡಿದ್ದಾರೆ. ಆದರೆ ಇವರಲ್ಲಿ ಯಾರೂ ಸಿಎಂ ಆಗುವುದಿಲ್ಲ. ಬಿಜೆಪಿ ಚುನಾವಣೆ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್‌, ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರದ ಯೋಜನೆ ಸರಿಯಾಗಿ ಜಾರಿಯಾಗಿರಲಿಲ್ಲ: ಅಮಿತ್‌ ಶಾ

ಒಕ್ಕಲಿಗರು ಡಿಕೆ ಸಿಎಂ ಆಗಲಿ ಎನ್ನಬಹುದು. ಕುರುಬರು ಸಿದ್ದರಾಮಯ್ಯ ಸಿಎಂ ಆಗಲಿ ಎನ್ನಬಹದು. ಬಿಜೆಪಿ ಲಿಂಗಾಯತರು ಸಿಎಂ ಆಗಲಿ ಅಂದರೆ ತಪ್ಪೇನು ಎಂದು ಕೇಳಿದ್ದಕ್ಕೆ, ಬಿಜೆಪಿ ಜಾತಿಯ ಆಧಾರದಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದಿಲ್ಲ. ಸದಾನಂದ ಗೌಡರನ್ನೂ ಸಿಎಂ ಮಾಡಿದ್ದೆವು. ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್ ಅವರನ್ನೂ ಸಿಎಂ ಮಾಡಿದ್ದೇವೆ. ಆದರೆ ಈ ಬಾರಿ ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ ಎನ್ನುವುದು ಖಾತ್ರಿಯಾಗಿದೆ ಎಂದರು. ಇದನ್ನೂ ಓದಿ: ಮೋದಿ ಸುಶಿಕ್ಷಿತ ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತಾರೆ. ಆದರೆ ಇಲ್ಲಿ ಮೀಸಲಾತಿ ತೆಗೆಯಲಾಗಿದೆ? – ಪ್ರಶ್ನೆಗೆ ಅಮಿತ್‌ ಶಾ ಉತ್ತರ ನೀಡಿದ್ದು ಹೀಗೆ

 

ಬಹುಮತ ಬಾರದೇ ಇದ್ದರೆ ಜೆಡಿಎಸ್‌ (JDS) ಜೊತೆ ಹೋಗ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಜೆಡಿಎಸ್‍ಗೆ ಮತ ಹಾಕಿದರೆ ಅದು ಕಾಂಗ್ರೆಸ್‍ಗೆ ಹಾಕಿದಂತೆ ಎಂದು ನಾವು ಈಗಾಗಲೇ ಬಹಿರಂಗವಾಗಿ ಹೇಳುತ್ತಿದ್ದೇವೆ. ಕಳೆದ ಚುನಾವಣೆಯಲ್ಲಿ ನಮ್ಮದು ಅತಿದೊಡ್ಡ ಪಕ್ಷವಾಗಿತ್ತು. ಆದರೆ ಫಲಿತಾಂಶ ಬಂದ 12 ಗಂಟೆಯೊಳಗೆ ಜೆಡಿಎಸ್ ಕಾಂಗ್ರೆಸ್ ಜೊತೆ ಕೈ ಜೋಡಿಸಿಬಿಟ್ಟಿತ್ತು. ಜೆಡಿಎಸ್‍ಗೆ ಮತ ಹಾಕಿದರೆ ಅದು ಎಲ್ಲಿ ಹೋಗುತ್ತದೆ ಎನ್ನುವುದು ಜನರಿಗೂ ಗೊತ್ತಿದೆ. ಹೀಗಾಗಿ ಕಾಂಗ್ರೆಸ್‍ಗೆ ಮತ ಹೋಗಬಾರದು ಅಂದರೆ ಬಿಜೆಪಿಯೊಂದೇ ಆಯ್ಕೆ. ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ. ಹಿಂದಿನ ಚುನಾವಣೆಯ ಸಮಯದಲ್ಲಿ ಜೆಡಿಎಸ್ ಜನಾದೇಶಕ್ಕೆ ವಿರುದ್ಧವಾಗಿ ಹೋಗಿರುವುದರಿಂದ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದ್ದೇವೆ ಎಂದು ಉತ್ತರಿಸಿದರು.

Share This Article