Explainer | 2 ಲಕ್ಷ ಟನ್ ಬಾಸ್ಮತಿ ಅಕ್ಕಿ, 3,000 ಕಂಟೇನರ್‌ ಬಂದರಿನಲ್ಲೇ ಲಾಕ್‌ – ಭಾರತಕ್ಕೆ ಮತ್ತೊಂದು ಸಂಕಷ್ಟ!

3 Min Read

ಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣದಿಂದಾಗಿ ಪ್ರಮುಖ ತೈಲ ಪೂರೈಕೆ ಮಾರ್ಗ ಹಾರ್ಮುಜ್ ಜಲಸಂಧಿ (Hormuz Strait) ಬಂದ್ ಆಗಿರುವುದು ಭಾರತೀಯ ಸರಕು ಸಾಗಣೆ ವಲಯಕ್ಕೆ ಆರ್ಥಿಕ ಅಪಾಯ ತಂದೊಡ್ಡಿದೆ. 27 ಭಾರತೀಯ ಹಡಗುಗಳು ಹಾರ್ಮುಜ್‌ ಜಲಸಂಧಿ ಪ್ರದೇಶದಲ್ಲೇ ಸಿಲುಕಿಕೊಂಡಿದ್ದು, 10,000 ಕೋಟಿಗೂ ಅಧಿಕ ಮೌಲ್ಯದ ಸರಕು ಅಪಾಯದಲ್ಲಿವೆ. ಈ ಮಧ್ಯೆ ಭಾರತದ ಬಾಸ್ಮತಿ ಅಕ್ಕಿ ರಫ್ತುದಾರರೂ (Rice Exports) ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಅಮೆರಿಕ ಮತ್ತು ಇಸ್ರೇಲ್‌ ಜಂಟಿ ದಾಳಿಗೆ (US Israel Strikes) ಪ್ರತಿಯಾಗಿ ಇರಾನ್‌ ಅಮೆರಿಕದ ಸೇನಾ ನೆಲೆಗಳಿರುವ ಕೊಲ್ಲಿದೇಶಗಳನ್ನ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಇದು ಭಾರತದ ಅಕ್ಕಿ (Indian Rice) ರಫ್ತುದಾರರಿಗೆ ದೊಡ್ಡ ಹೊಡೆತ ಕೊಟ್ಟಿದೆ. 2 ಲಕ್ಷ ಟನ್‌ ಅಕ್ಕಿಯನ್ನ ಹೊತ್ತ ಸಾವಿರಾರು ಕಂಟೇನರ್‌ಗಳು ಬಂದರಿನಲ್ಲೇ ಲಾಕ್‌ ಆಗಿವೆ. ಈ ಕುರಿತು ಇನ್ನಷ್ಟು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಮಾರ್ಚ್‌ 1 ರಿಂದ ಪಶ್ಚಿಮ ಏಷ್ಯಾದಲ್ಲಿ ಶುರುವಾದ ಸಂಘರ್ಷವು 6ನೇ ದಿನಕ್ಕೆ ಕಾಲಿಡುತ್ತಿದೆ. ಇದರಿಂದ ಗಲ್ಫ್‌ ಪ್ರದೇಶಳ ಆಮದುರಾರರಿಂದ ಪಾವತಿಗಳ ಅನಿಶ್ಚಿತತೆ ಎದುರಿಸುವಂತಾಗಿದೆ. ಜೊತೆಗೆ ಸಾವಿರಾರು ಕಂಟೇನರ್‌ಗಳು ಬಂದರಿನಲ್ಲೇ ಸಿಲುಕಿದ್ದು (Containers Stuck In Port), ಭಾರತೀಯ ರಫ್ತುದಾರು ಡೆಮುರೇಜ್ ಶುಲ್ಕಗಳ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಡೇಮುರೇಜ್‌ ಶುಲ್ಕ ಅಂದ್ರೆ ಆಮದುದಾರರು ಬಂದರಿನಲ್ಲಿ ʻನಿಗದಿತ ಉಚಿತʼ ದಿನಗಳನ್ನು ಮೀರಿದ ನಂತರ ತಮ್ಮ ಸರಕು ಅಥವಾ ಕಂಟೇನರ್‌ಗಳನ್ನು ತೆರವುಗೊಳಿಸುವಲ್ಲಿ ವಿಫಲವಾದ್ರೆ ಶಿಪ್ಪಿಂಗ್ ಲೈನ್ ಅಥವಾ ಬಂದರು ಅಧಿಕಾರಿಗಳಿಗೆ ಪಾವತಿಸಬೇಕಾದ ದಂಡದ ಮೊತ್ತವಾಗಿದೆ. ಇದು ಸರಕುಗಳ ವಿಳಂಬಕ್ಕೆ ವಿಧಿಸಲಾಗುವ ಹೆಚ್ಚುವರಿ ಸಂಗ್ರಹಣಾ ವೆಚ್ಚವಾಗಿದ್ದು, ದಿನಕ್ಕೆ ಪ್ರತಿ ಕಂಟೇನರ್‌ಗೆ ಸರಾಸರಿ 4,500 ರೂ. ನಿಂದ 13,000 ರೂ.ವರೆಗೆ ಇರುತ್ತದೆ.

ರಂಜಾನ್‌ ಸಮಯದಲ್ಲೇ ಬೇಡಿಕೆ ಹೆಚ್ಚು
ಇರಾನ್‌ ಭಾರತದ ಬಾಸ್ಮತಿ ಅಕ್ಕಿಯ ಆಮದುದಾರ ದೇಶಗಳಲ್ಲಿ 2ನೇ ಸ್ಥಾನದಲ್ಲಿದ್ದರೆ, ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದೆ. ಯುಎಇ, ಒಮನ್‌, ಯೆಮೆನ್‌, ಇರಾಕ್‌ ಸಹ ಭಾರತದ ಬಾಸ್ಮತಿ ಖರೀದಿದಾರ ದೇಶಗಳಾಗಿವೆ. ಬಾಸ್ಮತಿ ಜೊತೆಗೆ ಗೋಬಿಂದೊ ಭೋಗ್‌ ಮತ್ತು ಸೋನಾ ಮಸೂರಿ ತಳಿಯ ಅಕ್ಕಿ ಸಹ ರಫ್ತಾಗುತ್ತವೆ. ಸಾಮಾನ್ಯವಾಗಿ ಮಾರ್ಚ್‌ ತಿಂಗಳಲ್ಲಿ ಅತಿಹೆಚ್ಚು ಪ್ರಮಾಣದ ಅಕ್ಕಿ ರಫ್ತಾಗುತ್ತದೆ. ಅದರಲ್ಲೂ ರಂಜಾನ್‌ ಸಂದರ್ಭದಲ್ಲಿ ವ್ಯಾಪಾರ ಹೆಚ್ಚಾಗಿಯೇ‌ ಇರುತ್ತದೆ. ಆದ್ರೆ ಮಾರ್ಚ್ ಮೊದಲ ವಾರವೇ ಯುದ್ಧದ ಸನ್ನಿವೇಶ ನಿರ್ಮಾಣವಾಗಿರುವುದರಿಂದ ರಫ್ತು ವಹಿವಾಟಿನ ಮೇಲೆ ಯುದ್ಧದ ಕಾರ್ಮೋಡ ಕವಿದಿದೆ.

ಬೇರೆ ಮಾರ್ಗವೇ ಇಲ್ಲವೇ?
ಮಧ್ಯಪ್ರಾಚ್ಯ ದೇಶಗಳಿಗೆ ಭಾರತದಿಂದ ಸರಕುಗಳನ್ನು ಸಾಗಿಸಬೇಕಾದರೆ ಕೆಂಪು ಸಮುದ್ರ ಮತ್ತು ಹಾರ್ಮುಜ್‌ ಜಲಸಂಧಿ ಮೂಲಕವೇ ಹೋಗಬೇಕಾಗುತ್ತದೆ. ಕೆಂಪು ಸಮುದ್ರ ಪ್ರದೇಶದಲ್ಲಿ ಹೌತಿ ಬಂಡುಕೋರರ ಕಾಟ. ಹೌತಿಗಳು ಹಡಗುಗಳ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಬಹುದು. ಹಾಗೆಯೇ ಹಾರ್ಮುಜ್‌ ಜಲಸಂಧಿಯನ್ನ ಇರಾನ್‌ ಮುಚ್ಚಿದೆ. ಇದರಿಂದ ಸರಕು ಸಾಗಣೆ ದುಸ್ತರವಾಗಿದೆ.

ಅಕ್ಕಿ ರಫ್ತುದಾರರ ಆತಂಕ ಏನು?
ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ (AIREA) ಅಧ್ಯಕ್ಷ ಸತೀಶ್ ಗೋಯೆಲ್ ಹೇಳುವಂತೆ, ಭಾರತ ಸುಮಾರು 60 ಲಕ್ಷ ಟನ್ ಬಾಸ್ಮತಿ ರಫ್ತು ಮಾಡುತ್ತದೆ. ಅದರಲ್ಲಿ ಸುಮಾರು 40 ಲಕ್ಷ ಟನ್ ಗಲ್ಫ್ ಪ್ರದೇಶಕ್ಕೆ ಹೋಗುತ್ತದೆ. ಆದ್ರೆ ಯುದ್ಧ ಕಾರ್ಮೋಡದಿಂದಾಗಿ ಸುಮಾರು 2 ಲಕ್ಷ ಟನ್ ಬಾಸ್ಮತಿ ಭಾರತೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ. ಇದರಿಂದ ರಫ್ತುದಾರರು ಸ್ಥಿರ ವಿತರಣಾ – ಬೆಲೆ ಒಪ್ಪಂದಗಳಿಂದ ನಷ್ಟಕ್ಕೂ ಒಳಗಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಅಕ್ಕಿ ರಫ್ತುದಾರರ ಸಮಸ್ಯೆಗಳ‌ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದು ಶುಕ್ರವಾರ (ಮಾ.6) ಉನ್ನತ ಮಟ್ಟದ ಸಭೆ ನಡೆಸಲು ಮುಂದಾಗಿದೆ. ಅಕ್ಕಿ ರಫ್ತುದಾರರ ಒಕ್ಕೂಟದ ಜೊತೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದೊಂದಿಗೆ ಪ್ರಮುಖ ಸಭೆ ನಡೆಸುವ ಸಾಧ್ಯತೆಯಿದೆ. ಸಭೆಯಲ್ಲಿ ರಫ್ತುದಾರರು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳನ್ನ ಸುಗಮಗೊಳಿಸುವ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತದೆ. ಭಾರತೀಯ ಬಂದರುಗಳಲ್ಲಿ 3,000 ಕ್ಕೂ ಹೆಚ್ಚು ಕಂಟೇನರ್‌ಗಳು ಸಿಲುಕಿಕೊಂಡಿದ್ದು, ಬಂದರು ಶುಲ್ಕ ಮನ್ನಾ ಮಾಡುವಂತೆ ಮಾಡುವಂತೆ ಮನವಿ ಮಾಡಿದ್ದೇವೆ, ಹಲವಾರು ಬೆಂಬಲ ಕ್ರಮಗಳನ್ನೂ ಕೋರಿದ್ದೇವೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟದ (IREF) ಉಪಾಧ್ಯಕ್ಷ ದೇವ್ ಗರ್ಗ್ ತಿಳಿಸಿದ್ದಾರೆ.

ಈ ಮಧ್ಯೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯೆಲ್‌ ಕೂಡ ಪ್ರಮುಖ ಲಾಜಿಸ್ಟಿಕ್ಸ್‌ ಮತ್ತು ವ್ಯಾಪಾರ ಸೌಲಭ್ಯ ಪಾಲುದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಭೌಗೋಳಿಕ, ರಾಜಕೀಯ ಪರಿಸ್ಥಿತಿ ಮತ್ತು ಭಾರತದ ರಫ್ತು ಮತ್ತು ಆಮದುಗಳ ಮೇಲಿನ ಸಂಭಾವ್ಯ ಪರಿಣಾಮಗಳನ್ನ ಪರಿಶೀಲಿಸುವಂತೆ ಹೇಳಿದ್ದಾರೆ.

ಅಕ್ಕಿ ರಫ್ತುದಾರರ ಒಕ್ಕೂಟದ ಸಲಹೆ ಏನು?
ಈಗಿನ ಪರಿಸ್ಥಿತಿಯಲ್ಲಿ ಸರಕು ರವಾನೆ ವೆಚ್ಚ ಹಾಗೂ ವಿಮಾ ವೆಚ್ಚ ಕೂಡ ಅಧಿಕವಾಗಲಿದೆ. ಈಗಿರುವ ವ್ಯವಸ್ಥೆಯಲ್ಲಿ (ಸಿಐಎಫ್‌) ಮಾರಾಟಗಾರರು ಅಥವಾ ರಫ್ತುದಾರರೇ ವಿಮಾ ವೆಚ್ಚವನ್ನು ಭರಿಸಬೇಕು. ಹೀಗಾಗಿ, ಸಿಐಎಫ್‌ ಬದಲು ಎಫ್‌ಒಬಿ (ಫ್ರೀ ಆನ್‌ ಬೋರ್ಡ್‌) ಗುತ್ತಿಗೆಗಳನ್ನು ಮಾಡಿಕೊಳ್ಳುವಂತೆ ತನ್ನ ಸದಸ್ಯರಿಗೆ ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟ ತಿಳಿಸಿದೆ.

Share This Article