ವಿದ್ವತ್ ಮೆಡಿಕಲ್ ರಿಪೋರ್ಟ್ ಹ್ಯಾರಿಸ್ ಕೈ ಸೇರಿದ್ದು ಹೇಗೆ? – ಸಿಸಿಬಿಯಿಂದ ಮಲ್ಯ ಆಸ್ಪತ್ರೆ ವೈದ್ಯರಿಗೆ ನೋಟಿಸ್

Public TV
1 Min Read

ಬೆಂಗಳೂರು: ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್‍ಎ ಹ್ಯಾರಿಸ್ ಮಗ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಆರೋಪಿ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್‍ಗೆ ಚಿಕಿತ್ಸೆ ನೀಡಿದ ಮಲ್ಯ ಆಸ್ಪತ್ರೆ ವೈದ್ಯರಿಗೆ ಇದೀಗ ನೋಟಿಸ್ ಬಂದಿದೆ.

ಆಸ್ಪತ್ರೆಯ ವೈದ್ಯರಾದ ಡಾ. ಆನಂದ್‍ಗೆ ಸಿಸಿಬಿ ಪೊಲೀಸರು ಈ ನೋಟಿಸ್ ನೀಡಿದ್ದು, ತನಿಖಾಧಿಕಾರಿಗೆ ಸಿಗದ ವಿದ್ವತ್ ಡಿಸ್ಚಾರ್ಜ್ ವರದಿ ಆರೋಪಿಯ ಅಪ್ಪ ಶಾಸಕ ಹ್ಯಾರಿಸ್‍ಗೆ ಸಿಕ್ಕಿದ್ದು ಹೇಗೆ? ಇದಕ್ಕೆ ಸೂಕ್ತ ಉತ್ತರ ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.

ಶುಕ್ರವಾರದಂದು ಹೈಕೋರ್ಟ್‍ನಲ್ಲಿ ಡಾ. ಆನಂದ್ ಮೇಲೆ ಆರೋಪ ಕೇಳಿಬಂದಿತ್ತು. ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ಯಾಂ ಸುಂದರ್ ಆನಂದ್ ಮೇಲೆ ಆರೋಪ ಮಾಡಿದ್ದರು. ನಾಗರಾಜ್ ರೆಡ್ಡಿ ಕಡೆಯಿಂದ ಡಿಸ್ಚಾರ್ಜ್ ರಿಪೋರ್ಟ್ ಸಿಕ್ಕಿತ್ತು ಎಂಬ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ವೈದ್ಯರ ಹೆಸರು ಸೂಚಿಸಿ ನೋಟಿಸ್ ನೀಡಲಾಗಿದ್ದು, ಸಿಸಿಬಿ ಮೂರು ದಿನಗಳ ಕಾಲಾವಕಾಶ ನೀಡಿದೆ. ಸೋಮವಾರದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಡಿಸ್ಚಾರ್ಜ್ ವರದಿಯನ್ನು ಮುಖ್ಯ ವೈದ್ಯಾಧಿಕಾರಿ ಬರೆಯಬೇಕಿತ್ತು. ಆದ್ರೆ ಡಾ. ಆನಂದ್ ಇದನ್ನು ಬರೆದಿದ್ದಾರೆ. ಅಲ್ಲದೇ ಅವರು ಆಸ್ಪತ್ರೆಯಲ್ಲಿ ಗಲಾಟೆಯಾಗಿಲ್ಲ, ವಿದ್ವತ್ ನಾಟಕ ಆಡ್ತಿದ್ದಾನೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ರೋಗಿಯ ಅರೋಗ್ಯ ಸ್ಥಿತಿಯನ್ನಷ್ಟೇ ಬರೆಯೋದು ಬಿಟ್ಟು ರೋಗಿಯ ಬೇರೆಲ್ಲಾ ವಿಚಾರ ಬರೆದಿರೋದ್ರಿಂದ ವೈಯುಕ್ತಿಕ ಹಿತಾಸಕ್ತಿ ಸಾಬೀತಾಗಿದೆ. ಮೇಲ್ನೋಟಕ್ಕೆ ವೈಯುಕ್ತಿಕ ಹಿತಾಸಕ್ತಿ ಗೊತ್ತಾಗಿರೋ ಹಿನ್ನೆಲೆಯಲ್ಲಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

Share This Article
Leave a Comment

Leave a Reply

Your email address will not be published. Required fields are marked *