ಹಾಸನ: ಮೂರೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಾಸನ ನಗರದ ಶಂಕರಿಪುರಂನಲ್ಲಿ ನಡೆದಿದೆ.
ಎಂ.ಕೆ ಅಶ್ವಿನಿ ಮನೆಯಲ್ಲಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ ಮಹಿಳೆ. ವರದಕ್ಷಿಣೆ ಕಿರುಕುಳಕ್ಕೆ ಅಶ್ವಿನಿ ಬಲಿಯಾಗಿದ್ದಾಳೆ ಎಂದು ಆಕೆಯ ಹೆತ್ತವರು ಆರೋಪಿಸುತ್ತಿದ್ದಾರೆ.
ಮೃತ ಅಶ್ವಿನಿ ಅವರು ಮೂರೂವರೆ ವರ್ಷದ ಹಿಂದೆ ಆದಿತ್ಯ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ದಂಪತಿ ಚೆನ್ನಾಗಿಯೇ ಇದ್ದರು. ಆದಿತ್ಯನಿಗೆ ಬುಸಿನೆಸ್ ನಲ್ಲಿ ನಷ್ಟವಾದ ಬಳಿಕ ಆತ ಅಶ್ವಿನಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಲಾಸ್ ನಂತರ ಪ್ರತಿನಿತ್ಯ ತವರು ಮನೆಯಿಂದ ಹಣ ತರುವಂತೆ ಅಶ್ವಿನಿಗೆ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಇದೀಗ ನಮಗೆ ಮಗಳ ಸಾವಿನ ಬಗ್ಗೆ ಅನುಮಾನವಾಗುತ್ತಿದೆ. ಪತಿ ಆದಿತ್ಯನೇ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಅಶ್ವಿನಿ ಪೋಷಕರು ಆರೋಪಿಸುತ್ತಿದ್ದಾರೆ.
ಅಶ್ವಿನಿ ಮೃತಪಟ್ಟ ಬಳಿಕ ಆದಿತ್ಯ ಹಾಗೂ ಆತನ ತಂದೆ ನಾಗೇಶ್ ನಾಪತ್ತೆಯಾಗಿದ್ದು, ಇದೀಗ ಮತ್ತಷ್ಟು ಅನುಮಾನಕ್ಕೀಡು ಮಾಡಿದೆ. ಘಟನೆ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.