ಸಿದ್ದಗಂಗಾ ಶ್ರೀ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿ ಈಗ ಪ್ರಾರ್ಥನಾ ಮಂದಿರ

Public TV
1 Min Read

ತುಮಕೂರು: ಶಿವಕುಮಾರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸಿದ್ದಗಂಗಾ ಆಸ್ಪತ್ರೆಯ ವಿಶೇಷ ಕೊಠಡಿ ಇದೀಗ ಪ್ರಾರ್ಥನಾ ಮಂದಿರವಾಗಿ ಪರಿವರ್ತನೆಯಾಗಿದೆ.

ಪ್ರಾರ್ಥನಾ ಮಂದಿರದ ಕೊಠಡಿಯಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ದಿನ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೇ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ವೈದ್ಯರು, ರೋಗಿಗಳು ಸಂಬಂಧಿಕರು ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಶ್ರೀಗಳು ಇದ್ದ ಕೊಠಡಿ ಪುಣ್ಯಸ್ಥಳವಾಗಿ ಮಾರ್ಪಟ್ಟಿದೆ.

ಶ್ರೀಗಳಿಗೆ ಮ್ಯೂಸಿಕ್ ಪ್ಲೇಯರ್ ಮೂಲಕ ಕೇಳಿಸುತ್ತಿದ್ದ ಶಿವಸ್ತುತಿಯೂ ಸಹ ಹಾಗೆಯೇ ಮುಂದುವರಿದಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿದ್ದ ಕೊಠಡಿ ಇದೀಗ ಬೇರೆ ಯಾವುದೇ ರೋಗಿಗಳಿಗೆ ನೀಡದೇ ಪ್ರಾರ್ಥನ ಮಂದಿರವಾಗಿ ಪರಿವರ್ತನೆ ಮಾಡಲಾಗಿದೆ.

ಈ ಬಗ್ಗೆ ಸಿದ್ದಗಂಗಾ ಆಸ್ಪತ್ರೆ ಎಂಡಿ ಡಾ. ಪರಮೇಶ್ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಾಗ ಅವರನ್ನು ಚೆನ್ನೈನ ರೇಲಾ ಅವರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದೇವು. ಬಳಿಕ ಅವರನ್ನು ವಾಪಸ್ ಕರೆದುಕೊಂಡು ಬರುವಾಗ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದೇವು. ಆದರೆ ಸ್ವಾಮೀಜಿ ಅವರು ಮಠದಲ್ಲಿಯೇ ಚಿಕಿತ್ಸೆ ನೀಡಿ ಎಂದರು. ಆಗ ನಾವು ಅವರ ಇಚ್ಛೆಯಂತೆ ಮಠದಲ್ಲೇ 15 ದಿನ ಚಿಕಿತ್ಸೆ ನೀಡಿದ್ದೇವೆ” ಎಂದರು.

ಮತ್ತೆ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾದಾಗ ಅವರ ಅನುಮತಿ ಪಡೆದುಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವು. ಸ್ವಾಮೀಜಿಗಾಗಿ ಆಸ್ಪತ್ರೆಯ ಕೊಠಡಿಯಲ್ಲೇ ದೇವರ ಮನೆ ಮಾಡಿದ್ದೇವು. ಬಳಿಕ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದೇವು. ಅವರ ನೆನಪಿಗಾಗಿ ನಾವು ಈ ಕೋಣೆಯನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತನೆ ಮಾಡಲಾಗಿದೆ. ಈ ಕೊಠಡಿಯಲ್ಲಿ ಯಾವ ರೋಗಿಗೂ ಚಿಕಿತ್ಸೆ ನೀಡುವುದಿಲ್ಲ. ಈಗ ಈ ಕೊಠಡಿ ಹೇಗೆ ಇದೆಯೋ ಹಾಗೇ ಇರಲಿದೆ. ದಿನನಿತ್ಯ ಸ್ವಾಮೀಜಿ ಅವರಿಗೆ ಇಲ್ಲಿ ಪೂಜೆ ನಡೆಯಲಿದೆ. ರೋಗಿಗಳ ಸಂಬಂಧಿಕರು ಬಂದು ಇಲ್ಲಿ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದು ಪರಮೇಶ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *