ಕೋಲಾರ: ಪ್ರೇಮ ವಿಚಾರ ತಿಳಿದು ತಾಯಿಯೇ ತಾನು ಬೆಳಸಿದ್ದ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
18 ವರ್ಷದ ರಾಜೇಶ್ವರಿ ಕೊಲೆಯಾದ ಯುವತಿ. ತಂದೆಯಿಲ್ಲದ ರಾಜೇಶ್ವರಿಯನ್ನು ತಾಯಿ ವೆಂಕಟಮ್ಮ ಕೂಲಿ ನಾಲಿ ಮಾಡಿ ಸಾಕಿದ್ದರು. ಮಗಳು ಚೆನ್ನಾಗಿರಲಿ ಎಂದು ಪಿಯುಸಿ ಓದಿಸುತ್ತಿದ್ದರು. ಆದರೆ ರಾಜೇಶ್ವರಿ ಅದೇ ಗ್ರಾಮದ ಯುವಕನ ಪ್ರೇಮಪಾಶದಲ್ಲಿ ಸಿಲುಕಿದ್ದಳು.
ರಾಜೇಶ್ವರಿಯ ಪ್ರೇಮ ವಿಚಾರವನ್ನು ತಿಳಿದ ಗ್ರಾಮಸ್ಥರು ಆಕೆಯ ತಾಯಿಯನ್ನು ನಿಂದಿಸಿದ್ರು. ಇದರಿಂದ ನೊಂದ ತಾಯಿ ಸಾಕಷ್ಟು ಬಾರಿ ಮಗಳಿಗೆ ಬುದ್ದಿ ಮಾತು ಹೇಳಿದ್ರು ಕೇಳಲಿಲ್ಲ. ಸೋಮವಾರ ರಾತ್ರಿ ಮರ್ಯಾದೆಗೆ ಅಂಜಿದ ತಾಯಿ ಮಗಳನ್ನ ಥಳಿಸಿದ್ದಾಳೆ. ಈ ವೇಳೆ ಕಪಾಳಕ್ಕೆ ಜೋರಾಗಿ ಪೆಟ್ಟುಬಿದ್ದ ಪರಿಣಾಮ ರಾಜೇಶ್ವರಿ ಮೃತಪಟ್ಟಿದ್ದಾಳೆ.
ಇನ್ನೂ ಬೆಳಗ್ಗೆ ಗುಟ್ಟಾಗಿ ಮಗಳ ಅಂತ್ಯಸಂಸ್ಕಾರಕ್ಕೆ ವೆಂಕಟಮ್ಮ ಮುಂದಾಗಿದ್ರು. ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆಯಲ್ಲಿ ವೆಂಕಟಮ್ಮ ಮಗಳ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.