ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಪ್ರೇಯಸಿಯ ಕಣ್ಮುಂದೆಯೇ ಪ್ರೇಮಿಯ ಕೊಲೆ!

Public TV
1 Min Read

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ದೇಹ ಪತ್ತೆ ಬಳಿಕ ಘಟನೆ ಬೆಳಕಿಗೆ ಬಂದ್ರೂ ಪ್ರೇಮಿ ನಾಗರಾಜ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ ಅನ್ಯ ಕೋಮಿನ 20 ವರ್ಷದ ಯುವತಿ ಹಾಗೂ ಚಿತ್ರದುರ್ಗ ಮೂಲದ 25 ವರ್ಷದ ಯುವಕ ನಾಗರಾಜ ಕೊಲೆಯಾದ ಪ್ರೇಮಿಗಳಾಗಿದ್ದಾರೆ. ಕಳೆದ ಮಾರ್ಚ್ 24 ರಂದು ಪ್ರೇಮಿಗಳು ಮನೆ ಬಿಟ್ಟು ಓಡಿಹೋಗುವ ವೇಳೆ ಸಿಕ್ಕಿಬಿದ್ದಿದ್ದರು. ಆಗ ಪ್ರಿಯತಮೆ ಮುಂದೆಯೇ ಪ್ರೇಮಿ ನಾಗರಾಜ ಮೇಲೆ ಆಕೆ ತಂದೆ ಹಾಗೂ ಸಹೋದರ ಹಲ್ಲೆ ನಡೆಸಿದ್ದಾರೆ. ನಾಗರಾಜನನ್ನು ಹೊಡೆದು ಆತ ಸಾವನ್ನಪ್ಪಿದ್ದಾನೆ ಎಂದುಕೊಂಡು ಗೋಣಿಚೀಲದಲ್ಲಿ ಬಿಸಾಕಿ ಹೋಗಿದ್ದಾರೆ. ಆದರೆ ಇನ್ನೂ ಜೀವಂತವಿದ್ದ ನಾಗರಾಜನ ದೇಹವನ್ನ ಜಿ.ಕೋಡಿಹಳ್ಳಿ ಕ್ರಾಸ್ ಬಳಿ ಸ್ಥಳೀಯರು ನೋಡಿದ್ದಾರೆ. ಪ್ರಜ್ಞೆ ತಪ್ಪಿದ್ದ ನಾಗರಾಜನನ್ನು ದಾವಣಗೆರೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕ್ಸಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಿ ನಾಗರಾಜ ಸಾವನ್ನಪ್ಪಿದ್ದಾರೆ.

ಕೊಲೆಯಾದ ನಾಗರಾಜ ಹಾಗೂ ಯುವತಿ ಕಳೆದ ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರಿಗೂ ಸಹ ತಿಳಿದಿತ್ತು. ನಾಗರಾಜನ ಕೊಲೆಯನ್ನು ನೋಡಿದ ಮಗಳು ಎಲ್ಲಿ ಬಾಯಿ ಬಿಡುತ್ತಾಳೋ ಅಂತಾ ಹೆದರಿ ಯುವತಿಯನ್ನು ಸಹ ಹೊಡೆದು ಕೊಲೆ ಮಾಡಿದ್ದರು. ನಂತರ ಹೃದಯಾಘಾತದ ಕಥೆ ಕಟ್ಟಿ ಅಂತ್ಯಸಂಸ್ಕಾರ ಮಾಡಿದ್ದರು.

ಪ್ರೇಮಿ ನಾಗರಾಜ ಕೊಲೆಯಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸುತ್ತಿದ್ದರು. ಯುವತಿಯ ಸಂಬಂಧಿಕರನ್ನು ಕರೆದು ವಿಚಾರಣೆ ಮಾಡುತ್ತಿದ್ದಂತೆ ಯುವತಿಯ ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್‍ಪಿ ಆರ್.ಚೇತನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *