Honeymoon Murder | ಬೇರೊಂದು ಮಹಿಳೆ ಹತ್ಯೆಗೈದು ಸೋನಮ್ ಶವವೆಂದು ನಂಬಿಸೋಕೆ ಮುಂದಾಗಿದ್ದ ಹಂತಕರು

Public TV
2 Min Read

– ಪತಿಯನ್ನು ಕೊಲ್ಲಲು 4 ಬಾರಿ ಪ್ಲ್ಯಾನ್‌ ಮಾಡಿದ್ದ ಹಂತಕಿ ಸೋನಮ್

ಶಿಲ್ಲಾಂಗ್: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ ತೆರಳಿದ್ದಾಗ ಪತಿಯನ್ನು ಹತ್ಯೆಗೈದು ಪೊಲೀಸರ ಅತಿಥಿ ಆಗಿರುವ ಸೋನಮ್‌ನ ಸಂಚುಗಳು ಬಗೆದಷ್ಟು ಬಯಲಾಗುತ್ತಿವೆ. ಹಂತಕರು ಬೇರೊಂದು ಮಹಿಳೆಯನ್ನು ಕೊಂದು ಸೋನಮ್ ಶವವೆಂದು ನಂಬಿಸಲು ಮುಂದಾಗಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇಂದೋರ್ (Indore) ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲಿ ಹನಿಮೂನ್‌ಗೆ ಕರೆದೊಯ್ದು ಪತಿಯನ್ನು ಹತ್ಯೆಗೈದ ಆರೋಪಿ ಪತ್ನಿ ಸೋನಂ ರಘುವಂಶಿ ಹಾಗೂ ಹಂತಕರ ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ.ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

ಜೂ.11ರ<ದು ಮೇಘಾಲಯ ಪೊಲೀಸರು ಸೋನಮ್ ಹಾಗೂ ಇನ್ನುಳಿದ ಆರೋಪಿಗಳನ್ನು ಶಿಲ್ಲಾಂಗ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಐದು ಆರೋಪಿಗಳನ್ನು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.

ಪೊಲೀಸರ ತನಿಖೆ ವೇಳೆ, ಸೊಹ್ರಾದಲ್ಲಿನ ಜಲಪಾತವನ್ನು ನೋಡಲು ಶಿಖರವನ್ನು ಹತ್ತಿಕೊಂಡು ಹೋಗುವಾಗ ನಿರ್ಜನ ಪ್ರದೇಶದಲ್ಲಿ ಹಂತಕರು ರಾಜಾ ರಘುವಂಶಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಅಲ್ಲದೇ, ಆತನ ಮೃತದೇಹವನ್ನು ಕಮರಿಗೆ ಎಸೆದಿದ್ದರು. ಅದಾದ ನಂತರ ಇನ್ನೊಬ್ಬ ಮಹಿಳೆಯನ್ನು ಕೊಂದು ಶವವನ್ನು ಸುಟ್ಟು, ಆಕೆಯನ್ನೇ ಸೋನಮ್ ಎಂದು ನಂಬಿಸಬೇಕೆಂದು ಕೊಂಡಿದ್ದರು. ಸತ್ಯ ಬಯಲಾಗುವವರೆಗೂ ಸೋನಮ್‌ನ್ನು ಎಲ್ಲಿಯಾದರೂ ಅಡಗಿಸಿಡುವ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.ಇದನ್ನೂ ಓದಿ: ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್

Share This Article