ಚುನಾವಣೆ ಪ್ರಕ್ರಿಯೆಯಿಂದ ಗೃಹ ಸಚಿವರನ್ನು ದೂರ ಇಡಬೇಕು: ಹೆಚ್‍ಕೆ ಪಾಟೀಲ್ ಆಗ್ರಹ

Public TV
1 Min Read

ಕಾರವಾರ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಮಾಜಿ ಸಚಿವ ಎಚ್‍ಕೆ ಪಾಟೀಲ್ ಆಗ್ರಹಿಸಿದ್ದಾರೆ.

ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುವವರೆಗೂ ಬೊಮ್ಮಾಯಿ ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಬೇಕು. ನವೆಂಬರ್ 20 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಯಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದೇ ಹಾಗೇ ಬಿಡಲಾಗಿತ್ತು. ಈ ಬಗ್ಗೆ ಚೆಕ್‍ಪೋಸ್ಟ್ ನಲ್ಲಿದ್ದ ಪೊಲೀಸರು ಬೆಂಗಾವಲು ವಾಹನದ ಚಾಲಕನನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿರುವುದು ನೋಡಿದರೆ ಗೃಹ ಸಚಿವರೇ ಅಕ್ರಮ ನಡೆಸಿದಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಬಿಜೆಪಿಯವರು ಮಾಡಿದ ಕುತಂತ್ರಕ್ಕೆ ಜನರು ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ. ರಾಜಕೀಯ ಅನೈತಿಕತೆಯನ್ನೇ ಬಿಜೆಪಿಗರು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ, ಬೆಂಗಾಲ್‍ನಲ್ಲಿ ಆದ ಮುಖಭಂಗದಿಂದಾದರೂ ಬಿಜೆಪಿ ಪಾಠ ಕಲಿಯಬೇಕು ಎಂದರು.

ಸಿ.ಎಂ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದಮ್ಮೆ ಹಾಕಲಿ. ಈಗ ಸಾರ್ವಜನಿಕರ ಮುಂದೆ ಹೇಳುವುದನ್ನೇ ನ್ಯಾಯಾಲಯದಲ್ಲಿ ಹೇಳುತ್ತೇವೆ. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಒಪ್ಪಿಗೆ ಪಡೆದು ರಾಜೀನಾಮೆ ಕೊಡಿಸಿದ್ದೇವೆ ಎಂದು ಹೇಳಿದ್ದಾರೆ. ಇದರ ವಿಡಿಯೋ ಸಹ ಅವರ ಕಾರ್ಯಕರ್ತರೇ ಹೊರ ಬಿಟ್ಟಿದ್ದಾರೆ ಎಂದು ಹೇಳಿದರು.

ಭೀಮಣ್ಣ ಗೆಲ್ತಾರೆ: ಯಲ್ಲಾಪುರದ ಕ್ಷೇತ್ರದಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಅಕ್ರೋಶದ ಅಲೆ ಇದೆ. ಇದರಿಂದ ಭೀಮಣ್ಣ ನಾಯ್ಕ ಗೆಲ್ಲುತ್ತಾರೆ. ಹೆಬ್ಬಾರ್ ಪಕ್ಷಕ್ಕೆ ದ್ರೋಹವೆಸಗಿ ಹೋಗಿದ್ದಾರೆ ಇದರಿಂದ ಕ್ಷೇತ್ರದಲ್ಲಿ ಅವರ ವಿರುದ್ಧ ಅಲೆ ಹೆಚ್ಚಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಅನುಕಂಪವಿದೆ. ಈ ಕಾರಣದಿಂದ ಗೆಲ್ಲುತ್ತಾರೆ ಎಂದು ತಮ್ಮ ಅಭ್ಯರ್ಥಿ ಗೆಲುವಿನ ಕುರಿತು ಪಾಟೀಲ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *