ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ `ಗಡ್ಡ’ ಗಲಾಟೆ – ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸುವಂತೆ ತಾಕೀತು ಆರೋಪ

Public TV
2 Min Read

– ಗಡ್ಡ ಬೋಳಿಸಲು ಮುಸ್ಲಿಂ ಸಮುದಾಯದ ಯುವಕರ ನಕಾರ

ಹಾಸನ: ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ಕಾಲೇಜು ಮಂಡಳಿ ತಾಕೀತು ಮಾಡಿದ್ದಾರೆ ಎಂಬ ಆರೋಪ ಕೇಳಿ ಹಾಸನದಲ್ಲಿ (Hassan) ಕೇಳಿ ಬಂದಿದೆ.

ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದ ನರ್ಸಿಂಗ್ ಕಾಲೇಜಿನಲ್ಲಿ ಜಮು-ಕಾಶ್ಮೀರದ ಹದಿಮೂರು ವಿದ್ಯಾರ್ಥಿಗಳು ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಾಲೇಜಿಗೆ ಗಡ್ಡ ಬಿಟ್ಟುಕೊಂಡು ಬರುತ್ತಿರುವುದಲ್ಲದೇ ಕಾಲೇಜಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದರಿಂದ ಕಾಲೇಜಿನ ಆಡಳಿತ ಮಂಡಳಿ ಗಡ್ಡ ಬೋಳಿಸಿಕೊಂಡು ಬಂದು ಶಿಸ್ತಿನಿಂದ ವರ್ತಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಗಡ್ಡ ಬೋಳಿಸಲು ಮುಸ್ಲಿಂ ಸಮುದಾಯದ ಯುವಕರು ನಿರಾಕರಿಸಿದ್ದು, ತಮ್ಮ ಸಂಪ್ರದಾಯದಂತೆ ನಾವು ಗಡ್ಡ ಬಿಡುವುದಾಗಿ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಸಂಬಂಧ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್‌ಗೆ ಮೊರೆ ಹೋಗಿದ್ದಾರೆ. ಪಿಎಂಎಸ್‌ಎಸ್ ಯೋಜನೆಯಡಿ ಜಮ್ಮು-ಕಾಶ್ಮೀರದಿಂದ ಹೊಳೆನರಸೀಪುರಕ್ಕೆ ವ್ಯಾಸಂಗಕ್ಕಾಗಿ ಬಂದಿರುವ ಯುವಕರು ಕಾಲೇಜು ಪ್ರಾಂಶುಪಾಲರ ಮೌಖಿಕ ಆದೇಶಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಗಡ್ಡ ಬೋಳಿಸಿಕೊಂಡು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಈ ಕ್ರಮ ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಯವಂತೆ ಒತ್ತಾಯಿಸಿ ಎಕ್ಸ್ನಲ್ಲೂ ವಿದ್ಯಾರ್ಥಿಗಳು ಪೋಸ್ಟ್ ಮಾಡಿದ್ದಾರೆ.

ಪ್ರಕರಣ ಬೇರೆ ಹಂತಕ್ಕೆ ಹೋಗಬಾರದೆಂದು ಎಚ್ಚೆತ್ತ ಪ್ರಾಂಶುಪಾಲರು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ವಿವಾದ ಬಗೆಹರಿಸಲಾಗಿದೆ ಎಂದು ಸಂಧಾನ ಮಾತುಕತೆಯಲ್ಲಿ ತಿಳಿಸಿದ್ದಾರೆ.

ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಉಮರ್ ಮಾತನಾಡಿ, ನಮಗೆ ಗಡ್ಡ ತೆಗೆಯುವಂತೆ ಪ್ರಾಂಶುಪಾಲರು ಸೂಚಿಸಿದರು. ಅಲ್ಲದೇ ಶಿಸ್ತು ಕಾಪಾಡಿ, ಸಮವಸ್ತ್ರ ಧರಿಸಿ ಬರುವಂತೆ ಸೂಚನೆ ನೀಡಿದರು. ಇದು ಸೂಕ್ಷ್ಮವಾದ ವಿಚಾರವಾಗಿತ್ತು. ನಾವು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬಂದಿದ್ದೇವೆ. ನಾವು ಕೊಳಕು ಬಟ್ಟೆ ಹಾಕಿಲ್ಲ. ನಮ್ಮ ರೂಂಗಳನ್ನು ಪರಿಶೀಲಿಸಿ, ಎಲ್ಲರಂತೆ ನಾವು ಶಿಸ್ತಿನಿಂದ ಕಾಲೇಜಿಗೆ ಬರುತ್ತಿದ್ದೇವೆ. ನಾವು ಟ್ರಿಂ ಮಾಡಿಕೊಂಡೇ ಕಾಲೇಜಿಗೆ ಬರುತ್ತಿದ್ದೇವೆ. ಪ್ರಾಂಶುಪಾಲರು ನಮ್ಮ ಜೊತೆ ಮಾತನಾಡಿದ್ದಾರೆ. ಎಲ್ಲಾ ಸಮಸ್ಯೆ ಬಗೆಹರಿದಿದೆ, ಇದನ್ನು ದೊಡ್ಡ ವಿಷಯ ಮಾಡಬೇಡಿ. ನಾವು ಜಮ್ಮು ಕಾಶ್ಮೀರ ಸ್ಟೂಡೆಂಟ್ ಅಸೋಸಿಯೇಷನ್ ಜೊತೆಯೂ ಮಾತನಾಡಿದ್ದೇವೆ. ನಾವು ಇಲ್ಲಿ ಸುರಕ್ಷಿತವಾಗಿ ಇದ್ದೇವೆ. ಮುಂದೆ ಈ ರೀತಿ ಆಗುವುದಿಲ್ಲ. ಆ ರೀತಿ ಮತ್ತೆ ನಿಮ್ಮನ್ನು ಸಂಪರ್ಕ ಮಾಡುತ್ತೇವೆ ಎಂದು ಹೇಳಿದ್ದೇವೆ. ಯಾವುದೇ ವಿವಾದ ಇಲ್ಲ, ಬಗೆಹರಿದಿದೆ ಎಂದು ತಿಳಿಸಿದ್ದಾರೆ.

Share This Article