ರಾಯಚೂರು: ಇತಿಹಾಸ ಪ್ರಸಿದ್ದ ಸೂಗೂರೇಶ್ವರ ದೇವರ ಜೋಡು ರಥೋತ್ಸವವು ಜಿಲ್ಲೆಯ ದೇವಸೂಗೂರಿನಲ್ಲಿ ಗುರುವಾರದಂದು ಅದ್ಧೂರಿಯಾಗಿ ನೆರವೇರಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಸೂಗೂರೇಶ್ವರ ದೇವಾಲಯದಲ್ಲಿ ಡಿಸೆಂಬರ್ 7 ರಿಂದ ಜಾತ್ರಾ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ದೇವಾಲಯದ ಹೊರಾಂಗಣದಲ್ಲಿ ಜೋಡುರಥಗಳ ಉತ್ಸವ ಈ ಬಾರಿ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆದಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.
ಸೂಗೂರೇಶ್ವರ ದೇವರು ಮೂಲ ಜಂಗಮ ಸ್ವರೂಪ ಹಾಗೂ ವೀರಭದ್ರೇಶ್ವರನ ಅಪರವತಾರ ರೂಪದಲ್ಲಿ ಸಾಕಷ್ಟು ಪವಾಡಗಳನ್ನ ಮಾಡಿರುವುದರಿಂದ ದೇವಸೂಗೂರಿನಲ್ಲಿ ಒಂದೇ ದೇವರ ಎರಡು ರಥಗಳನ್ನ ಎಳೆಯಲಾಗುತ್ತದೆ. ಇಡೀ ಉತ್ತರ ಕರ್ನಾಟಕದಲ್ಲೇ ಅದ್ಧೂರಿಯಾಗಿ ನಡೆಯುವ ಜೋಡು ರಥೋತ್ಸವ ಎಂಬ ಹೆಗ್ಗಳಿಕೆಯೂ ಇದೆ. ಪ್ರತಿ ಬಾರಿಯಂತೆ ರಥೋತ್ಸವ ವೀಕ್ಷಣೆಗೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಸೇರಿ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ.
ಸೂಗೂರೇಶ್ವರ ದೇವರಿಗೆ ಹರಕೆಗಳನ್ನು ಹೊತ್ತು ಉಪವಾಸ ವ್ರತ ಕೈಗೊಳ್ಳುವ ಭಕ್ತರು ರಥೋತ್ಸವ ಬಳಿಕವೇ ಪ್ರಸಾದವನ್ನ ಸ್ವೀಕರಿಸುತ್ತಾರೆ. ಡಿಸೆಂಬರ್ 7 ರಿಂದ 18ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವ ಹಿನ್ನೆಲೆ ರಾಯಚೂರು, ಯಾದಗಿರಿ ಜಿಲ್ಲೆಯ ವಿವಿಧೆಡೆಯಿಂದ ಭಕ್ತರಿಗಾಗಿ ಸಾರಿಗೆ ಇಲಾಖೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ.
https://www.youtube.com/watch?v=U4DjJyDyXDw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv