ಮೈಸೂರು: ನಗರದ ಕೋಟೆ ಹುಂಡಿಯಲ್ಲಿ ಮುಸ್ಲಿಂ ಕುಟುಂಬವೊಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಿ, ಸಾಮರಸ್ಯ ಬಿಂಬಿಸಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಾಕೀರ್ ಹುಸೇನ್ ಹಾಗೂ ಮಮತಾ ದಂಪತಿ ಮನೆಯಲ್ಲಿ ವರಮಹಾಲಕ್ಷ್ಮಿ ಮೂರ್ತಿಯನ್ನು ಸಿಂಗಾರ ಮಾಡಿ, ಹಿಂದೂ ಸಂಪ್ರದಾಯದಂತೆ ವಿಧಿವಿಧಾನ ಪೂಜೆ ನೆರವೇಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಚಿಂತಕ ಪ್ರೊ. ಭಗವಾನ್ ಹಾಗೂ ದಲಿತ ಮುಖಂಡ ಹೋರಾಟಗಾರ ಶಿವರಾಮು ಭಾಗವಹಿಸಿ, ದಂಪತಿಗೆ ಹಾರೈಸಿದರು.
ಜಾಕೀರ್ ಹುಸೇನ್ ದಂಪತಿ ಕಳೆದ ಎರಡು ವರ್ಷಗಳಿಂದ ವರಮಹಾಲಕ್ಷ್ಮಿ ಪೂಜೆ ಮಾಡುತ್ತಾ ಬಂದಿದ್ದಾರೆ. ಈ ದಂಪತಿ ಪ್ರೀತಿಸಿ ಮದುವೆ ಆಗಿದ್ದು, ಹಿಂದೂ-ಮುಸ್ಲಿಂ ಹಬ್ಬ, ಆಚರಣೆ, ಸಾಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ. ಬಕ್ರಿದ್ ಹಬ್ಬದ ಬಳಿಕ ಈಗ ವರಮಹಾಲಕ್ಷ್ಮಿ ಪೂಜೆಯನ್ನು ಜಾಕೀರ್ ಹುಸೇನ್ ದಂಪತಿ ಆಚರಿಸುತ್ತಿದ್ದಾರೆ ಎಂದು ದಲಿತ ಮುಖಂಡ ಹೋರಾಟಗಾರ ಶಿವರಾಮು ಹೇಳಿದ್ದಾರೆ.
ಹಿಂದೂ-ಮುಸ್ಲಿಂ ಸಾಮರಸ್ಯ ಸಾರಲು, ಕೋಮುಭಾವನೆ ತೊಲಗಲು ಇಂತಹ ಆಚರಣೆಗಳು ಅಗತ್ಯವಾಗಿದೆ. ಮೌಢ್ಯ ಹಾಗೂ ಕಂದಾಚಾರ ತೊಲಗಿ ಮಾನವ ಜನಾಂಗ ಒಂದೇ ಎನ್ನುವುದು ಎಲ್ಲರಲ್ಲಿಯೂ ಮೂಡಲಿ ಎಂದು ಹಿರಿಯ ಸಾಹಿತಿ, ಚಿಂತಕ ಪ್ರೊ. ಭಗವಾನ್ ತಿಳಿಸಿದರು.
ಇನ್ನೊಬ್ಬರ ಪ್ರೇರಣೆಯಿಂದ ಈ ರೀತಿ ಆಚರಣೆ ಮಾಡುತ್ತಿಲ್ಲ. ದೇಶದಲ್ಲಿ ಸಾಮರಸ್ಯ, ಸಹೋದರತ್ವ ಸಾರುವ ಉದ್ದೇಶದಿಂದ ಹಿಂದೂ-ಮುಸ್ಲಿಂ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಇಂತಹ ಆಚರಣೆಗಳು ಎಲ್ಲರನ್ನೂ ಸೇರಿಸುತ್ತವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಇಂತಹ ಆಚರಣೆಗಳನ್ನು ಮಾಡುತ್ತೇವೆ ಎಂದು ಜಾಕೀರ್ ಹುಸೇನ್, ಪಬ್ಲಿಕ್ ಟಿವಿಗೆ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv