ಕಮಲೇಶ್ ತಿವಾರಿ ಹತ್ಯೆ ಪ್ರಕರಣ: ಐವರು ಆರೋಪಿಗಳು ಅರೆಸ್ಟ್

Public TV
2 Min Read

ಲಕ್ನೋ: ಹಿಂದೂ ಮಹಾಸಭಾದ ನಾಯಕ, ರಾಜಕಾರಣಿ ಕಮಲೇಶ್ ತಿವಾರಿ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಮೌಲಾನಾ ಅನ್ವರ್ಲ್ ಹಕ್, ಮುಫ್ತಿ ನಯೀಮ್ ಖಾಜ್ಮಿ, ಗುಜರಾತ್ ಮೂಲದ ಮೌಲಾನಾ ಮೊಹ್ಸಿನ್ ಶೇಖ್ (24), ರಶೀದ್ ಅಹ್ಮದ್ ಪಠಾಣ್ (23) ಮತ್ತು ಫೈಜಾನ್ (21) ಬಂಧಿತ ಆರೋಪಿಗಳು. ಉತ್ತರ ಪ್ರದೇಶ ಹಾಗೂ ಗುಜರಾತ್ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಉತ್ತರ ಪ್ರದೇಶ ಡಿಜಿಪಿ ಓ.ಪಿ.ಸಿಂಗ್ ಅವರು, ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವು. ಬಳಿಕ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಫುಟೇಜ್ ಪಡೆದು ನೋಡಿದಾಗ ಗುಜರಾತ್ ಮೂಲದವರು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಜಂಟಿ ಕಾರ್ಯಚರಣೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಕಮಲೇಶ್ ತಿವಾರಿ 2015ರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆಗೈದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೊಲೆಯ ಹಿಂದೆ ಇರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಓ.ಪಿ.ಸಿಂಗ್ ತಿಳಿಸಿದ್ದಾರೆ.

ಆರೋಪಿಗಳು ಕೇಸರಿ ಬಟ್ಟೆ ಧರಿಸಿ ದೀಪಾವಳಿ ಉಡುಗೊರೆ ನೀಡುವ ನೆಪದಲ್ಲಿ ಕಮಲೇಶ್ ತಿವಾರಿ ಅವರ ಕಚೇರಿಗೆ ಬಂದಿದ್ದರು. ಈ ವೇಳೆ ತಿವಾರಿ ಅವರ ಜೊತೆಗೆ ಚಹಾ ಕುಡಿದು ಹತ್ಯೆಗೆ ಪ್ಲ್ಯಾನ್ ರೂಪಿಸಿದ್ದರು. ಸ್ವೀಟ್ ನೀಡುವ ನೆಪದಲ್ಲಿ ಬಾಕ್ಸ್ ತೆರೆದ ಆರೋಪಿಗಳು ಅದರಲ್ಲಿದ್ದ ಗನ್‍ನಿಂದ ಗುಂಡು ಹಾರಿಸಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಕುತ್ತಿಗೆ, ಎದೆ, ಮುಖದ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದರು.

ಗುಂಡಿ ಶಬ್ದ ಕೇಳಿ ಕೂಡಲೇ ಸ್ಥಳಕ್ಕೆ ಬಂದಿದ್ದ ಸ್ಥಳೀಯರು ಕಮಲೇಶ್ ತಿವಾರಿ ಅವರನ್ನು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿವಾರಿ ಮೃತಪಟ್ಟಿದ್ದರು. ತಿವಾರಿ ಹತ್ಯೆ ಖಂಡಿಸಿ ಹಿಂದೂ ಮಹಾಸಭಾ ಸದಸ್ಯರು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದ ಪೊಲೀಸರು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *