ಶಿಮ್ಲಾ: ಅಯೋಧ್ಯೆಯ ರಾಮ ಮಂದಿರದ (Ayodhya Ram Mandir) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಸೋಮವಾರ ಹೇಳಿದ್ದಾರೆ. ಈ ಮೂಲಕ ಜನವರಿ 22 ರ ಕಾರ್ಯಕ್ರಮದ ಬಗ್ಗೆ ಪಕ್ಷದ ಉನ್ನತ ನಾಯಕರು ಕರೆ ಮಾಡದಿದ್ದರೂ ತಮ್ಮ ನಿಲುವನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ವಿಷಯವಲ್ಲ. ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶದ ಕೆಲವೇ ಕೆಲವು ಆಹ್ವಾನಿತರಲ್ಲಿ ನಾನೊಬ್ಬನಾಗಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಈ ಗೌರವವನ್ನು ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗೆ ಧನ್ಯವಾದವಾದಗಳು ಎಂದರು.
ಈ ಐತಿಹಾಸಿಕ ದಿನದ ಭಾಗವಾಗಲು ನನಗೆ ಹೆಮ್ಮೆಯಿದೆ. ಇದು ಜೀವಮಾನದಲ್ಲಿ ಸಿಗುವ ಒಂದೇ ಒಂದು ಅವಕಾಶವಾಗಿದೆ. ದೇವರಲ್ಲಿ ನಂಬಿಕೆ ಹೊಂದಿರುವ ಹಿಂದೂವಾಗಿ, ಈ ಸಂದರ್ಭದಲ್ಲಿ ಉಪಸ್ಥಿತರಿರುವ ಮತ್ತು ರಾಮನ ‘ಪ್ರಾಣ ಪ್ರತಿಷ್ಠೆ’ಗೆ ಸಾಕ್ಷಿಯಾಗುವುದು ನನ್ನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ
ಶನಿವಾರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಯೋಧ್ಯೆಯಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಪಿಡಬ್ಲ್ಯುಡಿ ಸಚಿವರು ಜನವರಿ 4 ರಂದು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಮಮಂದಿರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.
ಈ ವೇಳೆ ಮಾತನಾಡಿದ್ದ ಸೀಮಗ್, ನಾನು ಹಿಂದೂ ಧರ್ಮದ ಕುಟುಂಬದಿಂದ ಬಂದಿದ್ದೇನೆ. ನನ್ನ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ನಂಬಿಕೆಗಳಿಗೂ ರಾಜಕೀಯ ಸಿದ್ಧಾಂತಕ್ಕೂ ಯಾವುದೇ ಸಂಬಂಧವಿಲ್ಲ. ಇದು ನಾನು ಮತ್ತು ನನ್ನ ಕುಟುಂಬಕ್ಕೆ ಇರುವ ಆಳವಾದ ನಂಬಿಕೆಯಾಗಿದೆ. ನಾನು ಖಂಡಿತವಾಗಿಯೂ ರಾಮ ಮಂದಿರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದರು.