ಪರೀಕ್ಷಾ ಕೇಂದ್ರದಲ್ಲೂ ಹಿಜಬ್‌ ವಿದ್ಯಾರ್ಥಿನಿಯರ ಹೈಡ್ರಾಮಾ – ಮನೆಗೆ ನಡೆದ ವಿದ್ಯಾರ್ಥಿನಿಯರು

Public TV
2 Min Read

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷಾ ಸಮಯದಲ್ಲೂ ಹಿಜಬ್‌ ವಿದ್ಯಾರ್ಥಿನಿಯರು ಹೈಡ್ರಾಮಾ ಮುಂದುವರಿಸಿದ್ದಾರೆ. ಹಿಜಬ್‌ ಧರಿಸಿಯೇ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಪರೀಕ್ಷಾ ಮೇಲ್ವಿಚಾರಕರು ಮತ್ತು ತಹಶೀಲ್ದಾರ್‌ ಅನುಮತಿ ನೀಡದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ.

ರಾಜ್ಯಾದ್ಯಂತ ಇಂದಿನಿಂದ ದ್ವಿತಿಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆ ಆರಂಭವಾಗಿದ್ದು, ಉಡುಪಿಯ ಹಿಜಬ್‌ ಹೋರಾಟಗಾರ್ತಿಯರಾದ ಮಹಿಳಾ ಸರ್ಕಾರಿ ಪಿಯು ಕಾಲೇಜಿನ ಆಲಿಯಾ ಅಸಾದಿ ಮತ್ತು ರೇಷಂ ಕೊನೆ ಕ್ಷಣದಲ್ಲಿ ಹಾಲ್‌ ಟಿಕೆಟ್‌ ಪಡೆದಿದ್ದರು.

ಕಾಮರ್ಸ್ ವಿಭಾಗದ ಪರೀಕ್ಷೆ ಕೇಂದ್ರ ಉಡುಪಿ ವಿದ್ಯೋದಯ ಕಾಲೇಜಿನಲ್ಲಿದೆ. ಕಾಲೇಜಿನ ಒಳಗಡೆ ಪರೀಕ್ಷೆ ಬರೆಯುವಾಗ ಮಾತ್ರ ಹಿಜಬ್ ತೆಗೆಯಲು ಆದೇಶವಿದೆ. ಹೀಗಾಗಿ ಹಲವಾರು ಮುಸ್ಲಿಮ್ ವಿದ್ಯಾರ್ಥಿನಿಯರು ಕೇಂದ್ರಕ್ಕೆ ಬುರ್ಕಾ, ಹಿಜಬ್ ಧರಿಸಿಕೊಂಡು ಆಗಮಿಸಿದ್ದರು. ಕೇಂದ್ರದಲ್ಲಿ ಒಂದು ಕೊಠಡಿ ಇದ್ದು ಅಲ್ಲಿ ಹಿಜಬ್‌, ಬುರ್ಕಾ ತೆಗೆದು ಪರೀಕ್ಷಗೆ ಹಾಜರಾಗಬೇಕು. ಇದನ್ನೂ ಓದಿ: 14 ಮಸೀದಿಗಳ ಮೇಲೆ ದಾಖಲಾಯ್ತುFIR

ತಮ್ಮ ಕಾಲೇಜಿನಲ್ಲಿ ಬೆಳಗ್ಗೆ 10 ಗಂಟೆಗೆ ಹಾಲ್‌ ಟಿಕೆಟ್‌ ಪಡೆದ ಇಬ್ಬರು  ರಿಕ್ಷಾ ಮೂಲಕ ವಿದ್ಯೋದಯ ಕಾಲೇಜಿಗೆ ಆಗಮಿಸಿದ್ದರು. ಕಾಲೇಜಿಗೆ ಬಂದ ಬಳಿಕ ಈ ಇಬ್ಬರೂ ಹಿಜಬ್‌ ಧರಿಸಿಯೇ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ವಿಚಾರ ತಿಳಿದು ಉಡುಪಿಯ ತಹಶೀಲ್ದಾರ್‌ ಅರ್ಚನಾ ಭಟ್‌ ಪರೀಕ್ಷಾ ಕೇಂದ್ರಕ್ಕೆ ಬಂದು ವಿದ್ಯಾರ್ಥಿನಿಯರ ಮನ ಒಲಿಸುವ ಪ್ರಯತ್ನ ಮಾಡಿದ್ದರು. ಆದರೆ ಹಿಜಬ್‌ ಮುಖ್ಯ ಎಂಬ ಹಠಕ್ಕೆ ಬಿದ್ದ ವಿದ್ಯಾರ್ಥಿನಿಯರು ಕೊನೆಗೆ ಪರೀಕ್ಷಾ ಕೇಂದ್ರದಿಂದ ಮನೆ ಕಡೆ ತೆರಳಿದ್ದಾರೆ.

ಸರ್ಕಾರ ಹೈಕೋರ್ಟ್ ತೀರ್ಪಿನಂತೆ ಹಿಜಬ್ ತೆಗೆದು ಪರೀಕ್ಷೆಗೆ ಬರಬೇಕು ಎಂದು ಕಟ್ಟುನಿಟ್ಟಾಗಿ ಆದೇಶ ಪ್ರಕಟಿಸಿತ್ತು. ಇದರ ಜೊತೆಗೆ ಹಾಲ್ ಟಿಕೆಟ್ ಪಡೆದುಕೊಳ್ಳಲು ಪರೀಕ್ಷೆ ಆರಂಭವಾಗಲು ಕೊನೆಯ ಕ್ಷಣದವರೆಗೂ ಉಡುಪಿಯ ಕಾಲೇಜು ಅವಕಾಶ ನೀಡಿತ್ತು.

18 ವಿದ್ಯಾರ್ಥಿನಿಯರ ಪೈಕಿ ಈ ವಿದ್ಯಾರ್ಥಿನಿಯರು ಗುರುವಾರದವರೆಗೂ ಪ್ರವೇಶ ಪತ್ರ ಪಡೆದಿರಲಿಲ್ಲ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೂಡಾ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿರಲಿಲ್ಲ. ಈ ಕಾಲೇಜಿನಲ್ಲಿ ಒಟ್ಟು 75 ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಆರು ಮಂದಿಯನ್ನು ಹೊರತುಪಡಿಸಿದರೆ ಉಳಿದವರೆಲ್ಲೂ ಸಮವಸ್ತ್ರದಲ್ಲಿಯೇ ತರಗತಿಗೆ ಆಗಮಿಸುತ್ತಿದ್ದರು.

ಹಿಜಬ್ ಸಂಘರ್ಷದ ಸಮಯದಲ್ಲಿ ಒಂದು ವೀಡಿಯೋದ ಮೂಲಕ ವಿಶ್ವಕ್ಕೆ ಸುದ್ದಿಯಾಗಿದ್ದ ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್ ಪರೀಕ್ಷೆ ಬರೆದಿರಲಿಲ್ಲ. ಹಿಜಬ್ ಸಂರ್ಘದ ವೇಳೆ ಫೆ.8 ರಂದು ಪಿಇಎಸ್ ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರೆ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಳು. ಈ ಘಟನೆ ನಡೆದ ಬಳಿಕ ಮುಸ್ಕಾನ್ ಕಾಲೇಜಿಗೆ ಆಗಮಿಸಿರಲಿಲ್ಲ.

ಮಾ.24ರಂದು ಮೈಸೂರು ವಿಶ್ವವಿದ್ಯಾಲಯದ ಎರಡನೇ ವರ್ಷದ ಬಿಕಾಂನ ಸೆಮಿಸ್ಟರ್ ಪರೀಕ್ಷೆ ಇತ್ತು. ಮುಸ್ಕಾನ್ ಕೂಡ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಮೂರನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *