ಹೈಕಮಾಂಡ್ ತುರ್ತು ಬುಲಾವ್ – ದೆಹಲಿಗೆ ತೆರಳಿದ ಡಿಕೆಶಿ

Public TV
1 Min Read

ನವದೆಹಲಿ: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಹೈಕಮಾಂಡ್ ತುರ್ತು ಬುಲಾವ್ ನೀಡಿದೆ. ಇದರಿಂದಾಗಿ ಶಿರಡಿಯಿಂದ ದೆಹಲಿಗೆ (Delhi) ಅವರು ತೆರಳಿದ್ದಾರೆ.

ಭಾನುವಾರ ಹೈಕಮಾಂಡ್ ನಾಯಕರನ್ನು ಅವರು ಭೇಟಿಯಾಗುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಡಿಕೆಶಿಯವರಿಗೆ ರಾಹುಲ್ ಗಾಂಧಿಯವರು (Rahul Gandhi) ಭೇಟಿಗೆ ಸಮಯ ನೀಡಿರಲಿಲ್ಲ. ಭೇಟಿಗೆ ಕಾದು ಕುಳಿತು ಅವಕಾಶ ಸಿಗದೇ ಶುಕ್ರವಾರ ಅವರು ಬೆಂಗಳೂರಿಗೆ (Bengaluru) ಮರಳಿದ್ದರು. ಇದನ್ನೂ ಓದಿ: 2 ಬಾರಿ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ರೂ ಡಿಕೆಶಿ ಭೇಟಿಗೆ ಅವಕಾಶ ನೀಡದ ರಾಹುಲ್‌!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿರುವ ನಡುವೆಯೇ ಡಿಕೆ ಶಿವಕುಮಾರ್‌ ಅವರು ಜುಲೈ 8 ಮಂಗಳವಾರ ದೆಹಲಿಗೆ ತೆರಳಿದ್ದರು. ಮಂಗಳವಾರ ಮತ್ತು ಬುಧವಾರ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಇಲಾಖೆ ಸಂಬಂಧ ಮಾತುಕತೆ ನಡೆಸಿದ್ದರು.

ಗುರುವಾರ ಡಿಕೆಶಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಹಾಗೆ ನೋಡಿದರೆ ಡಿಕೆಶಿ ಗುರುವಾರವೇ ರಾತ್ರಿ ಬೆಂಗಳೂರಿಗೆ ಮರಳಬೇಕಿತ್ತು. ಭೇಟಿಗೆ ಅವಕಾಶ ಸಿಗಬಹುದು ಎಂಬ ಕಾರಣಕ್ಕೆ ಎರಡು ಬಾರಿ ಡಿಕೆಶಿ ವಿಮಾನ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದರು.

ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ, ವಿಧಾನಪರಿಷತ್‌ ಸದಸ್ಯರ ನೇಮಕ ಸೇರಿ ವಿವಿಧ ವಿಷಯಗಳ ಬಗ್ಗೆ ರಾಹುಲ್‌ ಜೊತೆ ಚರ್ಚೆ ನಡೆಸಲು ಡಿಕೆಶಿ ಬಯಸಿದ್ದರು. ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಬೆಳವಣಿಗೆ ನಡೆಯುತ್ತಿದ್ದರೂ ರಾಹುಲ್‌ ಗಾಂಧಿ ಅವರು ಡಿಕೆಶಿ ಭೇಟಿಗೆ ಸಮಯವಕಾಶ ನೀಡದಿರುವುದು ಭಾರೀ ಕುತೂಹಲ ಮೂಡಿಸಿತ್ತು. ಈಗ ಮತ್ತೆ ತುರ್ತು ಬುಲಾಬ್‌ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ ಆಗಲ್ಲ, ಸಂಖ್ಯಾಬಲದ ಚರ್ಚೆ ಎಲ್ಲಿ ಬರುತ್ತೆ?- ಪ್ರಿಯಾಂಕ್‌ ಖರ್ಗೆ

Share This Article