ಈ 1 ಕಾರಣಕ್ಕಾಗಿ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ನಟಿಸುತ್ತಿಲ್ಲ `ಶಿವಣ್ಣ-ಅಪ್ಪು-ಕಿಚ್ಚ’

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಕನ್ನಡದ ಚಿತ್ರರಂಗದ ಅತಿರಥ ಮಹಾರಥರು ಈ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ಆದ್ರೆ ಇಂತಹ ಮಹೋನ್ನತ ಚಿತ್ರದಲ್ಲಿ ಅಪ್ಪು-ಕಿಚ್ಚ-ಶಿವಣ್ಣ ನಟಿಸುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ನಿರ್ಮಾಪಕ ಮುನಿರತ್ನ ಉತ್ತರಿಸಿದ್ದಾರೆ.

ಕಳೆದ ಎರಡು ವರ್ಷದ ಹಿಂದೆಯೇ ನಾನು ಈ ಚಿತ್ರವನ್ನ ನಿರ್ಮಾಣ ಮಾಡಿದ್ರೆ ಆಗ ಎಲ್ಲಾ ಕಲಾವಿದರ ಕಾಲ್ ಶೀಟ್ ಸಿಗುತ್ತಿತ್ತು. ಆದರೆ ನಾನು ಕಳೆದ ಎರಡು ತಿಂಗಳಿನಿಂದ ಗಡಿಬಿಡಿಯಾಗಿ ಕುರುಕ್ಷೇತ್ರದ ಸಿನಿಮಾ ಎತ್ತಿಕೊಂಡಿದ್ದೇನೆ. ಶಿವಣ್ಣ, ಸುದೀಪ್, ಪುನೀತ್ ರಾಜ್‍ಕುಮಾರ್ ಅವರು ಬೇರೆ ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಕಾಲ್ ಶೀಟ್ ಸಿಕ್ಕಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಕುರುಕ್ಷೇತ್ರ’ ಸಿನಿಮಾದ ಫೋಟೋ ಶೂಟ್ ಹೇಗಿದೆ ಗೊತ್ತಾ…?

ಸ್ಯಾಂಡಲ್‍ವುಡ್‍ನಲ್ಲಿ ಮೊದಲ ಬಾರಿಗೆ ಮಹಾಭಾರತದ ಯುದ್ಧ ಶುರುವಿನಿಂದ ಮುಗಿಯುವರೆಗಿನ ರೋಚಕ ಕಥೆಯನ್ನು ಸಿನಿಮಾ ಹೊಂದಿದೆ. ಸಂಗೊಳ್ಳಿ ರಾಯಣ್ಣ ಚಿತ್ರದ ನಂತರ ನಿರ್ದೇಶಕ ನಾಗಣ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸ್ಯಾಂಡಲ್‍ವುಡ್‍ನ ಅತಿರಥ ಮಹಾರಥರು ಈ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ರಕ್ತ ಕಣ್ಣೀರು, ಅನಾಥರು, ಕಠಾರಿವೀರ ಸುರಸುಂದರಾಂಗಿ ಚಿತ್ರಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಂತ ಮುನಿರತ್ನ ತಮ್ಮ ಕನಸಿನ ಸಿನಿಮಾ ‘ಕುರುಕ್ಷೇತ್ರ’ ಚಿತ್ರವನ್ನ ತ್ರೀಡಿ ತಂತ್ರಜ್ಞಾನವನ್ನ ಬಳಸಿಕೊಂಡು ಬಿಗ್ ಬಜೆಟ್‍ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಗೆ ಭಾನುವಾರ ಅಧಿಕೃತ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುನಿರತ್ನ ‘ಕುರುಕ್ಷೇತ್ರ’ಕ್ಕೆ ಕ್ಲ್ಯಾಪ್ ಮಾಡುವುದರ ಮೂಲಕ ಚಾಲನೆ ನೀಡಿದ್ರು.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ವಿ.ರವಿಚಂದ್ರನ್, ರೆಬಲ್ ಸ್ಟಾರ್ ಅಂಬರೀಶ್, ಶಶಿಕುಮಾರ್, ಸಾಯಿಕುಮಾರ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್ ಹೀಗೆ ಸ್ಯಾಂಡಲ್‍ವುಡ್ ಬಿಗ್ ಬಿಗ್ ಸೆಲಬ್ರೆಟಿಗಳು ಕನ್ನಡದ `ಕುರುಕ್ಷೇತ್ರ’ ಕದನದಲ್ಲಿ ಕಂಪಿಸಲಿದ್ದಾರೆ. ಜೆ.ಕೆ.ಭಾರವಿ ಸಂಭಾಷಣೆ ಬರೆದಿದ್ದಾರೆ. ಬಾಹುಬಲಿ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ ಕಿಂಗ್ ಸಾಲೋಮನ್ ಈ ಚಿತ್ರದ ಫೈಟ್ ಮಾಸ್ಟರ್. ವಿ.ಹರಿಕೃಷ್ಣ ಸ್ವರಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಹೂಮಾಲೆ ಕಟ್ಟಲಿದ್ದಾರೆ.

ಕುರುಕ್ಷೇತ್ರ ಹೈಲೈಟ್ಸ್: ಆಗಸ್ಟ್ 9ರಿಂದ ಮುನಿರತ್ನ ‘ಕುರುಕ್ಷೇತ್ರ’ ಚಿತ್ರೀಕರಣ ಆರಂಭವಾಗಲಿದೆ. ಹೈದರಾಬಾದ್‍ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕಾಗಿ 16 ವಿಭಿನ್ನ ಬಗ್ಗೆಯ ಗ್ರ್ಯಾಂಡ್ ಸೆಟ್ ಹಾಕಲಾಗುತ್ತದೆ. ಯಾವುದೇ ಬ್ರೇಕ್ ಇಲ್ಲದೆ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ಮೊದಲು ದರ್ಶನ್ ಮತ್ತು ಹರಿಪ್ರಿಯಾ ನಟನೆಯ ಹಾಡಿನ ಚಿತ್ರೀಕರಣ ನಡೆಯಲಿದೆ. ಇನ್ನೂ ಮುಂದಿನ ವರ್ಷ ಬರುವ ಸಂಕ್ರಾಂತಿ ಹಬ್ಬಕ್ಕೆ ಸೆನ್ಸಾರ್ ಮಾಡಿಸುವ ಗುರಿಯನ್ನು ಸಿನಿಮಾ ತಂಡ ಹೊಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *