ಸಾಲದ ಸುಳಿಯಲ್ಲಿ ಸಿಲುಕಿ ಸಾಹುಕಾರ ಸೈಲೆಂಟ್ – ಸಹಕಾರಿ ಬ್ಯಾಂಕ್‍ಗಳಿಗೆ 253 ಕೋಟಿ ರೂ. ಬಾಕಿ

Public TV
1 Min Read

– ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಭೀತಿ

ಬೆಳಗಾವಿ: ಆಪರೇಷನ್ ಕಮಲದ ಮುಂದಾಳತ್ವ ವಹಿಸಿಕೊಂಡು ಸರ್ಕಾರ ಕೆಡವಲು ಹೊರಟ ಮಾಜಿ ಸಚಿವ, ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಸೈಲೆಂಟ್ ಆಗಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಾಜೀನಾಮೆ ಕೊಡುತ್ತೇನೆ ಎಂದಿದ್ದ ರಮೇಶ್ ಜಾರಕಿಗಹೊಳಿ ಕಳೆದ ಒಂದು ತಿಂಗಳಿಂದ ಕಾಣಿಸುತ್ತಿಲ್ಲ. ಸಮ್ಮಿಶ್ರ ಸರ್ಕಾರ ಸೇಫ್ ಆಗಲು ಕೆಲವೊಂದು ದಾಖಲೆಗಳು ಕಾರಣವಂತೆ. ಆ ದಾಖಲೆಗಳನ್ನ ಇಟ್ಟುಕೊಂಡು ಸರ್ಕಾರ, ರಮೇಶ್ ಜಾರಕಿಹೊಳಿಯವರನ್ನು ಸೈಲೆಂಟ್ ಮಾಡಿತಾ ಅನ್ನೋ ಅನುಮಾನ ಎದ್ದಿದೆ.

ದಾಖಲೆಗಳೇನು?
ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯಿಂದ 253 ಕೋಟಿ ರೂ. ಸಾಲ ಬಾಕಿ ಇದೆ. ಸಾಲ ಮರುಪಾವತಿ ಮಾಡುವಂತೆ ಕಳೆದ ಆರು ತಿಂಗಳ ಹಿಂದೆಯೇ ಅಪೆಕ್ಸ್ ಬ್ಯಾಂಕ್ ನಿಂದ ನೋಟಿಸ್ ಕಳುಹಿಸಲಾಗಿತ್ತು.

ಎಲ್ಲೆಲ್ಲಿ ಎಷ್ಟೆಷ್ಟು ಬಾಕಿ?:
ಅಪೆಕ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ 119 ಕೋಟಿ ರೂ. ಸಾಲ ಬಾಕಿ, ಡಿಸಿಸಿ ಬ್ಯಾಂಕ್ ವಿಜಯಪುರ 40 ಕೋಟಿ, ಡಿಸಿಸಿ ಬ್ಯಾಂಕ್ ತುಮಕೂರು 31 ಕೋಟಿ, ಸೌಥ್ ಕೆನರಾ ಡಿಸಿಸಿ ಬ್ಯಾಂಕ್ ಮಂಗಳೂರು 31 ಕೋಟಿ, ಡಿಸಿಸಿ ಬ್ಯಾಂಕ್ ಶಿರಸಿ 31 ಕೋಟಿ ಸಾಲವಿದೆ. ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ ಪಡೆದುಕೊಂಡಿರುವ ರಮೇಶ್ ಜಾರಕಿಹೊಳಿ, ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕಲು ಅಪೆಕ್ಸ್ ಚಿಂತನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸದ್ಯ ಆಪರೇಷನ್ ಕಮಲದಿಂದ ದೂರ ಉಳಿದರಾ ಅನ್ನೋ ಅನುಮಾನವೂ ಮೂಡಿದೆ. ಯಾಕಂದರೆ ಶಾಸಕರ ರಮೇಶ್ ಅವರು ಕಳೆದ ಒಂದು ತಿಂಗಳಿಂದ ಯಾರ ಕೈಗೂ ಸಿಗದೆ ಸೈಲೆಂಟ್ ಆಗಿ ಉಳಿದಿದ್ದಾರೆ.

ಇತ್ತ ಸರ್ಕಾರ, ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ ಪಡೆದ ಹಣ, ಸಕ್ಕರೆ ಮಾರಿದ ಹಣ ಎಲ್ಲಿಗೆ ಹೋಯ್ತು. ರೈತರಿಗೆ ಕೊಡಬೇಕಾದ ಬಾಕಿ ಹಣ ಕೊಡಿಸಿ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *