ರಾಜ್ಯದ ಹಲವೆಡೆ ಮಧ್ಯರಾತ್ರಿಯೇ `ಹೆಬ್ಬುಲಿ’ ರಿಲೀಸ್ – ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

Public TV
1 Min Read

– ಟಿಕೆಟ್‍ಗಾಗಿ ಎಲ್ಲೆಲ್ಲೂ ನೂಕುನುಗ್ಗಲು

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಹೆಬ್ಬುಲಿ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಬುಧವಾರ ಮಧ್ಯರಾತ್ರಿಯೇ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ಬೆಂಗಳೂರಿನ ಕೆಲ ಥಿಯೇಟರ್‍ನಲ್ಲಿ ರಾತ್ರಿ 12.30 ರಿಂದಲೇ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.

ಬೆಂಗಳೂರಿನ ವೀರೇಶ್ ಹಾಗೂ ಸಂತೋಷ್ ಚಿತ್ರಮಂದಿರದ ಬಳಿಯೂ ಹೆಬ್ಬುಲಿ ಸಂಭ್ರಮ ಮನೆಮಾಡಿದೆ. ಈಗಾಗಲೇ 20-30 ಅಡಿಯ ಕಟೌಟ್‍ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳ ಸಡಗರ ಮುಗಿಲುಮುಟ್ಟಿದೆ.

ದಾವಣಗೆರೆ ನಗರದ ಎರಡು ಚಿತ್ರ ಮಂದಿರಗಳಲ್ಲಿ ಮಧ್ಯ ರಾತ್ರಿ 1 ಗಂಟೆಗೆ ತೆರೆಕಂಡಿತು. ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ 8 ಗಂಟೆಯಿಂದಲೇ ಟಿಕೆಟ್ ಗಾಗಿ ಮುಂದೆ ಕ್ಯೂ ನಿಂತಿದ್ದರು. ಕೆಲವರು ಹೆಬ್ಬುಲಿ ಸ್ಟೈಲ್ ನಲ್ಲಿ ಕೂದಲು ಬಿಟ್ಟಿದ್ದರೆ, ಇನ್ನು ಕೆಲ ಸುದೀಪ್ ಅಭಿಮಾನಿ ಬಳಗ ಹೀಗೆ ವಿವಿಧ ರೀತಿಯಲ್ಲಿ ಟಿ-ಶರ್ಟ್ ಧರಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು. ಮಧ್ಯ ರಾತ್ರಿ 12.30ಕ್ಕೆ ಸರಿಯಾಗಿ ಪಟಾಕಿ ಸಿಡಿಸಿ ಸಿನಿಮಾ 150 ದಿನ ಓಡಲಿ ಅಂತಾ ಸಂಭ್ರಮಿಸಿದರು. ರಾತ್ರಿ ಆರಂಭವಾದ ಮೊದಲ ಶೋಗೆ ಟಿಕೆಟ್ ಸಿಗದ ಅಭಿಮಾನಿಗಳು ದಾವಣಗೆರೆ ನಗರದ ಅಶೋಕ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಬೆಳಗ್ಗೆವರೆಗೂ ಕಾದು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಪ್ಯಾರಾಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ಸುದೀಪ್ ಅಣ್ಣನಾಗಿ ಮಿಂಚಿದ್ದಾರೆ. ಉಳಿದಂತೆ ರವಿಕಿಶನ್, ರವಿಶಂಕರ್, ಚಿಕ್ಕಣ್ಣ ಹಾಗ ಕಬೀರ್ ದುಹಾನ್ ಸಿಂಗ್ ಕೂಡಾ ನಟಿಸಿದ್ದಾರೆ. ಜೊತೆಗೆ ಮೊದಲ ಬಾರಿಗೆ ಕಾಲಿವುಡ್ ಸುಂದರಿ ಅಮಲಾ ಪಾಲ್ ಜೊತೆಯಾಗಿದ್ದಾರೆ. ರಘುನಾಥ್ ಮತ್ತು ಉಮಾಪತಿ ನಿರ್ಮಾಪಕರಾಗಿದ್ದು, ಚಿತ್ರದಲ್ಲಿ ಅರ್ಜುನ್ ಜನ್ಯ ಅವರ ಸಂಗೀತವಿದೆ.

 

Share This Article
Leave a Comment

Leave a Reply

Your email address will not be published. Required fields are marked *