ಬೆಂಗ್ಳೂರಿನಲ್ಲಿ ಭಾರೀ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ್ರು ಯುವಕರು – ಎಲ್ಲೆಲ್ಲಿ ಏನಾಗಿದೆ?

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ.  ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಹೇಳತೀರದಾಗಿದೆ. ಸಂಜೆಯಿಂದ ಬೆಂಗಳೂರಲ್ಲಿ ಧೋ ಎಂದು ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದ್ದು ನೀರಿನಲ್ಲಿ ಇಬ್ಬರು ಕೊಚ್ಚಿಹೋಗಿದ್ದಾರೆ.

ಕುರುಬರಹಳ್ಳಿ ಸರ್ಕಲ್ ವೆಂಕಟೇಶವರ ದೇವಾಲಯ ಬಳಿ ರಾಜಕಾಲುವೆ ನೀರಿನಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ಶುರುವಾದ ಭಾರೀ ಮಳೆ ಇಲ್ಲಿ ತನಕ ಮೋಡವೇ ಕುಸಿದು ಬಿದ್ದ ಹಾಗೆ ಸುರಿಯುತ್ತಿದೆ. ಹೆಬ್ಬಾಳ, ಮತ್ತೀಕೆರೆ, ಶಿವಾನಂದ, ಚಂದ್ರಲೇಔಟ್, ಗೊರಗುಂಟೆಪಾಳ್ಯ, ಯಶವಂತಪುರ, ರಾಜ್‍ಕುಮಾರ್ ಸಮಾಧಿ, ಲಗ್ಗೆರೆ ಸುತ್ತಮುತ್ತ ಭಾರೀ ಮಳೆಯಾಗಿದೆ.

ಶಿವಾನಂದ ಸರ್ಕಲ್‍ನ ರೈಲ್ವೆ ಅಂಡರ್‍ಪಾಸ್ ನೀರಿನಿಂದ ಜಲಾವೃತವಾಗಿದ್ದು, 2 ಕಾರುಗಳು ನೀರಿನಲ್ಲಿ ಮುಳುಗಿ ಹೋಗಿತ್ತು. ನದಿಯಂತೆ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಲಾಗದೆ ವಾಹನಸವಾರರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ.

ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ನೆಲಮಾಳಿಗೆ ಜಲಾವೃತವಾಗಿದೆ. ಬಸ್‍ಗಳು ನಿಂತಲ್ಲೇ ನಿಂತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಆರ್‍ಎಂಸಿ ಯಾರ್ಡ್ ಜಲಾವೃತವಾಗಿದೆ.

ಹೆಬ್ಬಾಳ, ಹೆಣ್ಣೂರು ಕೆರೆಗಳು ಕೋಡಿ ಬಿದ್ದಿದ್ದು, ಹೆಬ್ಬಾಳ, ನಾಗವಾರ ಪ್ರದೇಶಗಳು ಅಕ್ಷರಶಃ ನದಿಗಳಾಗಿವೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ನಗರವಾಸಿಗಳ ಜನಜೀವನ ಅಯೋಮಯವಾಗುವ ಲಕ್ಷಗಳು ಗೋಚರಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *