ಪಶ್ಚಿಮ ಘಟ್ಟದಲ್ಲಿ ಹೆಚ್ಚಿದ ಮಳೆ ಅಬ್ಬರ – ಕಪಿಲಾ ನದಿ ತುಂಬಿ ಶಿಶಿಲೇಶ್ವರ ದೇವಸ್ಥಾನ ಜಲಾವೃತ

Public TV
4 Min Read

– ತುಂಬಿ ಹರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಪಶ್ಚಿಮ ಘಟ್ಟದಲ್ಲಿ (Western Ghats) ಭಾರೀ ಮಳೆಯಾಗಿದೆ. ಘಟ್ಟ ಪ್ರದೇಶದಿಂದ ಹರಿದು ಬಂದ ಭಾರೀ ಮಳೆ ನೀರಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದ ನದಿಗಳೆಲ್ಲಾ ತುಂಬಿ ಹರಿಯುತ್ತಿದೆ. ಬೆಳ್ತಂಗಡಿ ಸಮೀಪದ ಕಪಿಲಾ ನದಿ ತುಂಬಿ ಹರಿದಿದ್ದು, ಮತ್ಸ್ಯಕ್ಷೇತ್ರ ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಜಲಾವೃತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಬೆಳ್ತಂಗಡಿಯ ಕಪಿಲಾ ನದಿಯಲ್ಲಿ ಭಾರೀ ನೀರಿನ ಹರಿವು ಹೆಚ್ಚಾಗಿದೆ. ಬೆಳ್ತಂಗಡಿಯ ಶಿಶಿಲದ ಕಪಿಲಾ ನದಿ ತಟದಲ್ಲಿರುವ ಮತ್ಸ್ಯಕ್ಷೇತ್ರ ಎಂದೇ ಪ್ರಸಿದ್ಧಿಯಾಗಿರುವ ಶಿಶಿಲೇಶ್ವರ ದೇವಸ್ಥಾನ (Shishileshwara Temple) ಜಲಾವೃತಗೊಂಡಿದೆ. ಭಾರೀ ನೀರಿನ ಹರಿವು ಹಿನ್ನೆಲೆ ದೇವಸ್ಥಾನ ಸಂಪರ್ಕದ ಸೇತುವೆ ಮುಳುಗಡೆಯಾಗಿದೆ. ಧುಮ್ಮಿಕ್ಕಿ ಹರಿಯುವ ನದಿಯ ನೀರಿನೊಂದಿಗೆ ಮರದ ದಿಮ್ಮಿಗಳೂ ತೇಲಿ ಬರುತ್ತಿದೆ. ದೇವಸ್ಥಾನದ ಸುತ್ತಲೂ ನೀರು ತುಂಬಿದ್ದು, ಮತ್ತಷ್ಟು ಮಳೆಯಾದರೆ ದೇವಸ್ಥಾನ ಸಂಪೂರ್ಣ ಜಲಾವೃತವಾಗುವ ಭೀತಿ ಎದುರಾಗಿದೆ. ಇದನ್ನೂ ಓದಿ: ವಿದ್ಯಾರ್ಥಿ ಸೋಗಿನಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ಗೆ ಅಕ್ರಮ ಪ್ರವೇಶ – ಮಂಗಳೂರು ಯುವಕ ಅರೆಸ್ಟ್‌

ಕಪಿಲಾ ನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ದೇವಸ್ಥಾನದ ಸುತ್ತಲೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನದಿಯ ನೀರು ರಭಸದಿಂದ ದೇವಸ್ಥಾನದ ಒಳಭಾಗಕ್ಕೂ ಹರಿದು ಬರುತ್ತಿದೆ. ಇದೇ ರೀತಿ ಪಶ್ಚಿಮ ಘಟ್ಟದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಮತ್ತಷ್ಟು ನೀರು ನುಗ್ಗಿ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಯುಪಿನಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಮೋದಿ ಅಧ್ಯಕ್ಷತೆಯ ಸಂಪುಟ ಅಸ್ತು!

ಮಂಗಳೂರು ನಗರದಲ್ಲಿ ಮಳೆ ಕಡಿಮೆಯಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಹಲವೆಡೆ ಗುಡ್ಡಕುಸಿತಗಳು ಸೇರಿದಂತೆ ಅವಾಂತರಗಳು ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು, ನದಿ ಪಾತ್ರದ ಜನ ಸೇರಿದಂತೆ ಜಿಲ್ಲೆಯ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಇದನ್ನೂ ಓದಿ: ಲೋಕಸಭಾಧ್ಯಕ್ಷ ಓಂ ಬಿರ್ಲಾರನ್ನು ಭೇಟಿ ಮಾಡಿದ ಯು.ಟಿ.ಖಾದರ್

ಹಾಸನ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ:
ಇನ್ನೂ ಹಾಸನ (Hassan) ನಗರ ಹಾಗೂ ಜಿಲ್ಲಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿ, ಹಳ್ಳ ಕೊಳ್ಳ ಉಕ್ಕಿ ಹರಿಯುತ್ತಿವೆ. ಸಕಲೇಶಪುರ ತಾಲೂಕಿನ, ದೋನಹಳ್ಳಿಯ ಬೆಣಗಿನಹಳ್ಳ ಉಕ್ಕಿ ಹರಿದು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. 2018ರಲ್ಲಿ ಭಾರೀ ಮಳೆಗೆ ಕಿರು ಸೇತುವೆ ಕೊಚ್ಚಿಹೋಗಿತ್ತು. ಏಳು ವರ್ಷ ಆದರೂ ಹೊಸ ಸೇತುವೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ ವಹಿಸಿದ್ದು, ಮಳೆ ಹೆಚ್ಚಾದ ಹಿನ್ನೆಲೆ ಬೆಣಗಿನಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳದ ಮತ್ತೊಂದು ಬದಿಯಲ್ಲಿರುವ ಜಮೀನುಗಳಿಗೆ ತೆರಳಲಾಗದೆ ರೈತರು ಪರದಾಡುತ್ತಿದ್ದಾರೆ. ಗ್ರಾ.ಪಂ. ಕಚೇರಿ, ಆಸ್ಪತ್ರೆ, ಮಾರುಕಟ್ಟೆಗೆ ಹತ್ತಾರು ಕಿಮೀ ಸುತ್ತಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಸೇತುವೆ ನಿರ್ಮಿಸಿ ಕೊಡದ ಅಧಿಕಾರಿಗಳು, ಜನ ಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Rain Alert | ಹಾಸನ ಜಿಲ್ಲೆಯ 3, ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಶಾಲೆಗಳಿಗೆ ಗುರುವಾರ ರಜೆ

ಮಳೆ ಹಾನಿ ಪ್ರದೇಶ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಡಿಸಿ ಕೆ.ಎಸ್.ಲತಾಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ, ಆನೆಮಹಲ್ ಸೇರಿ ಶಿರಾಡಿಘಾಟ್‌ನ ಹಲವು ಕಡೆ ಪರಿಶೀಲನೆ ನಡೆಸಿದರು. ಕೊಲ್ಲಹಳ್ಳಿ ಬಳಿ ಹೆದ್ದಾರಿ ತಡೆಗೋಡೆ ಬಿರುಕುಬಿಟ್ಟಿದ್ದು, ಮಳೆ ಹೆಚ್ಚಾದರೆ ಕುಸಿಯುವ ಆತಂಕ ಎದುರಾಗಿದೆ. ಇದನ್ನೂ ಓದಿ: ಇರಾನ್‌ ಮೇಲೆ ಅಮೆರಿಕ ದಾಳಿ ಸಂಪೂರ್ಣ ಯಶಸ್ವಿಯಾಗಿಲ್ಲ – ಟ್ರಂಪ್ ಮುಜುಗರಕ್ಕೆ ಕಾರಣವಾದ ಗುಪ್ತಚರ ವರದಿ

ಕೊಡಗಿನಲ್ಲಿ ಆರ್ದ್ರಾ ಮಳೆ ಆರ್ಭಟಕ್ಕೆ ಕಂಗಾಲಾದ ಜನ:
ಕೊಡಗು (Kodagu) ಜಿಲ್ಲೆಯಲ್ಲಿ ಮಳೆಯ ವಾತಾವರಣ ಮತ್ತೆ ಮುಂದುವರಿದಿದ್ದು, ಜನ ಕಂಗಾಲಾಗಿದ್ದಾರೆ. ಹಲವೆಡೆ ಆಸ್ತಿ-ಪಾಸ್ತಿ ಸಾಕಷ್ಟು ಹಾನಿಯಾಗುತ್ತಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕಿನ ಹಲವೆಡೆ ಮಳೆಯಿಂದ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ. ಅದರಲ್ಲೂ ಬಿರುನಾಣಿ-ಹುದಿಕೇರಿ (ಹೈಸೊಡ್ಲೂರು-ಪೊರಾಡ್ ಸೇತುವೆ ಬಳಿ) ರಸ್ತೆ ಬಳಿ ಸಣ್ಣ ಪ್ರಮಾಣದ ಗುಡ್ಡ ಕುಸಿತವಾಗಿದೆ. ಇದರಿಂದ ಬೃಹತ್ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೇ ಕುಟ್ಟ, ಬಿರುನಾಣಿ, ಶೆಟ್ಟಿಗೇರಿ, ಹುದಿಕೇರಿ, ಬಿ. ಶೆಟ್ಟಿಗೇರಿ ವ್ಯಪ್ತಿಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ನದಿ ತುಂಬಿ ಹರಿಯುತ್ತಿದೆ. ಇದನ್ನೂ ಓದಿ: Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್

ಈ ನಡುವೆ ಬಿರುನಾಣಿ ಗ್ರಾಮದ ಪೂಕಳ ಎಂಬಲ್ಲಿ ಮಳೆಯ ನೀರು ಸೇತುವೆ ಮೇಲೆ ಹರಿಯುತ್ತಿದ್ದಾಗಲೇ ಚಾಲಕನೊಬ್ಬ ಶಾಲಾ ವಾಹನ ಚಾಲನೆ ಮಾಡಿ ಹುಚ್ಚಾಟ ಮೆರೆದಿದ್ದಾನೆ. ಇನ್ನೂ ಮಡಿಕೇರಿ ತಾಲೂಕಿನ ನಾಪೋಕ್ಲು ವಿರಾಜಪೇಟೆ ರಸ್ತೆಯ ಎಡಪಾಲ ಸೇತುವೆ ಬಳಿ ಕಾವೇರಿ ನದಿ ನೀರಿನ ಪ್ರಮಾಣ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಇದನ್ನೂ ಓದಿ: ಕುಮಾವೂನ್ ವಿವಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜಗದೀಪ್ ಧನಕರ್

Share This Article