ಉಡುಪಿ | ಭಾರೀ ಮಳೆಗೆ ರೈಲ್ವೇ ಸೇತುವೆ ಬಳಿಯೇ ಭೂಕುಸಿತ

Public TV
1 Min Read

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಅವಾಂತರಗಳನ್ನು ಸೃಷ್ಟಿಸಿಬಿಟ್ಟಿದೆ. ಮೂಡು ಪೆರಂಪಳ್ಳಿ ಸಮೀಪ ನೂರಾರು ಮೀಟರ್ ಉದ್ದ ಭೂಮಿ ಕುಸಿತವಾಗಿದೆ. ಮೂರ್ನಾಲ್ಕು ಮೀಟರ್‌ ಭೂಮಿ ನದಿಯ ಭಾಗಕ್ಕೆ ಜಗ್ಗಿದೆ.

15 ದಿನಗಳ ಹಿಂದೆ ಬಿದ್ದ ಮಳೆಗೆ ಭೂಮಿ ಬಿರುಕಾಗಿದೆ. ಸಾಲು ಸಾಲು ತೆಂಗಿನ ಮರಗಳು ಬುಡ ಕಿತ್ತುಕೊಂಡು ನದಿಯತ್ತ ವಾಲಿದೆ. ಇದರಿಂದ ಕೊಂಕಣ ರೈಲ್ವೆಯ ಸೇತುವೆ ಪಕ್ಕದಲ್ಲಿ ಇರುವುದರಿಂದ ಅನಾಹುತ ಆಗುವ ಆತಂಕವಿದೆ.

30-40 ವರ್ಷದ ಹಿಂದೆ ಇಲ್ಲಿ ನದಿಗೆ ಕಲ್ಲುಗಳನ್ನು ತಡೆಗೋಡೆಯಾಗಿ ಕಟ್ಟಲಾಗಿತ್ತು. ನೀರಿನ ಅಲೆಗಳ ಹೊಡೆತ, ನೀರಿನ ಉಬ್ಬರ ಇಳಿತದ ಸಮಸ್ಯೆಯಿಂದ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಸಮಸ್ಯೆ ಹೆಚ್ಚಾಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭೂಕುಸಿತದಿಂದ ತೆಂಗಿನ ತೋಟ ನಂಬಿಕೊಂಡು ಜೀವನ ಮಾಡುವವರು ಆತಂಕಕ್ಕೀಡಾಗಿದ್ದಾರೆ. ಮತ್ತೆ ಮುಂಗಾರು ಅಬ್ಬರಿಸಿದರೆ ಒಂದೊಂದು ಮನೆಯವರ 15 ರಿಂದ 20 ಸೆಂಟ್ಸ್ ಜಾಗ ನದಿ ಪಾಲಾಗುವ ಆತಂಕವಿದೆ. ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಆಗಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯ.

Share This Article