ಬಿರು ಬೇಸಿಗೆಯಲ್ಲೂ ರಾಜ್ಯದಲ್ಲಿ ಮಳೆ ಅಬ್ಬರ – ಬೆಂಗ್ಳೂರು ರಸ್ತೆಗಳು ಜಲಮಯ

Public TV
2 Min Read

– ಹಾಸನ, ಹಾವೇರಿ ಸೇರಿ ವಿವಿಧೆಡೆ ಅವಾಂತರ

ಬೆಂಗಳೂರು: ನಗರದ ವಾತಾವರಣ ದಿಢೀರ್ ಬದಲಾಗಿದೆ. ಇದು ಬೇಸಿಗೆಯೋ ಮಳೆಗಾಲವೋ ಎನ್ನುವ ರೀತಿ ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿದಿದೆ.

ಕೆ.ಆರ್ ಪುರಂ, ಮಹದೇವಪುರ, ಸರ್ಜಾಪುರ, ವೈಟ್‌ಫೀಲ್ಡ್, ಹೆಚ್‌ಎಎಲ್ (HAL), ಈಜಿಪುರ ರಸ್ತೆಗಳು ಜಲಾವೃತವಾಗಿ ಸವಾರರು ಪರದಾಡಿದ್ರು. ಬಿಟಿಎಂ ಲೇಔಟ್, ತಾವರೆಕೆರೆ, ಗೊರಗುಂಟೆ ಪಾಳ್ಯದಲ್ಲೂ ಇದೇ ಸ್ಥಿತಿ ಕಂಡುಬಂದಿತು. ಅಂಡರ್‌ಪಾಸ್‌ಗಳು ತುಂಬಿದ್ವು. ಈಜಿಪುರ, ಕಸವನಹಳ್ಳಿಯ ಮನೆಗಳಿಗೆ ನೀರು ನುಗ್ಗಿತ್ತು. ರಾಜಾಜೀನಗರದಲ್ಲಿ ಮರ ಬಿದ್ದು ಎರಡು ಕಾರು ಜಖಂ ಆದ್ವು. ಸಿಕ್ಕ ಸಿಕ್ಕಲ್ಲಿ ರಸ್ತೆ ಅಗೆದಿರೋದು. ಅರೆಬರೆ ಕಾಮಗಾರಿ ನಡೆದಿರೋದು. ಕಾಲುವೆಗಳನ್ನು ಸ್ವಚ್ಛಗೊಳಿಸದೇ ಇರೋದು. ವೈಟ್‌ಟಾಪಿಂಗ್ ಕಾಮಗಾರಿ ಯಡವಟ್ಟುಗಳಿಂದ ಇಷ್ಟೆಲ್ಲಾ ಸಮಸ್ಯೆ ಆಗಿದೆ.

ಇದೇ ವೇಳೆ, ಚಿಕ್ಕಮಗಳೂರು, ಹಾಸನದಲ್ಲಿ ಭಾರೀ ಮಳೆ (Rain) ಆಗಿದ್ದು, ರಸ್ತೆಗಳ ಮೇಲೆ ನೀರು ಹರಿದಿದೆ. ಅಂಗಡಿಗಳಿಗೆ ನೀರು ನುಗ್ಗಿದೆ. ಬೆಳಗಾವಿಯ ಚಿಕ್ಕೋಡಿ, ಚಿತ್ರದುರ್ಗ, ಕೋಲಾರ, ಹೊಸಪೇಟೆಯಲ್ಲೂ ಮಳೆಯಾಗಿದೆ. ಹಾವೇರಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರ್ಕೆಟ್‌ನಲ್ಲಿ ತಮ್ಮ ಉತ್ಪನ್ನ ರಕ್ಷಿಸಿಕೊಳ್ಳಲು ರೈತರು ಒದ್ದಾಡಿದ್ರು. ಅಂದ ಹಾಗೇ, ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತಗಳು ಚುರುಕುಗೊಂಡ ಕಾರಣ ಮುಂದಿನ ಒಂದು ವಾರ ರಾಜ್ಯದಲ್ಲಿ ಗಾಳಿ ಸಹಿತ ಜೋರು ಮಳೆ ಆಗಲಿದೆ. ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ

ಚಿಕ್ಕಬಳ್ಳಾಪುರದ ಹಲವಡೆ ಮೊದಲ ಮಳೆ
ಚಿಕ್ಕಬಳ್ಳಾಪುರ ಸೇರಿ ಜಿಲ್ಲೆಯ ಹಲವು ಕಡೆ ಇಂದು ಮೊದಲ ಮಳೆ ಭರ್ಜರಿಯಾಗಿ ಅಬ್ಬರಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್, ಚದಲಪುರ ಸುತ್ತಮುತ್ತಲೂ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ಗೌರಿಬಿದನೂರು ಭಾಗದಲ್ಲೂ ಮಳೆಯಾಗಿದೆ. ಧಾರಕಾರ ಮಳೆಗೆ ಬಿಸಿಲಿನಿಂದ ಬಸವಳಿದ್ದ ಜನರಿಗೆ ತಂಪೆರೆದಂತಾಗಿದೆ. ರೈತರಿಗೂ ಸಹ ಮೊದಲ ಮಳೆ ಖುಷಿ ತಂದಿದೆ. ಚದಲಪುರ ವೃತ್ತದ ಬಳಿ ಹೆದ್ದಾರಿ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಸಹ ಪರದಾಡುವಂತಾಗಿತ್ತು. ಇದನ್ನೂ ಓದಿ: ರಣ ಬಿಸಿಲಿಗೆ ಕಂಗೆಟ್ಟಿದ್ದ ಬೀದರ್‌ಗೆ ತಂಪೆರೆದ ಅಕಾಲಿಕ ಮಳೆ

ತುಮಕೂರಿನಲ್ಲೂ ಧಾರಾಕಾರ ಮಳೆ:
ಕಲ್ಪತರು ನಾಡು ತುಮಕೂರು ನಗರ ಸೇರಿದಂತೆ ಹಲವೆಡೆ ಗುರುವಾರ ಮಧ್ಯಾಹ್ನ ಭರ್ಜರಿ ಮಳೆ ಸುರಿಯಿತು. ಗುರುವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಮಳೆಯ ಸಿಂಚನವಾಯಿತು. ಮಧ್ಯಾಹ್ನ 2:30ಕ್ಕೆ ಆರಂಭವಾದ ಮಳೆ 3 ಗಂಟೆಯವರೆಗೂ ಸುರಿಯಿತು. ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನರಿಗೆ ಮಳೆಯ ಸಿಂಚನದಿಂದಾಗಿ ಕೊಂಚ ನಿರಾಳರಾದರು. ಒಂದೇ ಸುರಿದ ಮಳೆಯಿಂದಾಗಿ ಜಿಲ್ಲೆಯ ವಾತಾವರಣ ತಂಪಾಯಿತು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮೊದಲ ವರ್ಷಧಾರೆ – ಜನರಲ್ಲಿ ಮಂದಹಾಸ

ಬೀದರ್‌ಗೆ ತಂಪೆರೆದ ಅಕಾಲಿಕ ಮಳೆ
ರಣ ಬಿಸಿಲಿನಿಂದ ಕಂಗೆಟ್ಟಿದ್ದ ಬೀದರ್ (Bidar) ಜನರಿಗೆ ಅಕಾಲಿಕ ಮಳೆ ಇಂದು ತಂಪೆರೆದಿದೆ. ಇಂದು ಜಿಲ್ಲೆಯಲ್ಲಿ ಗುಡುಗು, ಸಿಡಿಲು ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಬೀದರ್ ನಗರ ಸೇರಿ ಜಿಲ್ಲೆಯಾದ್ಯಂತ ಕೆಲಕಾಲ ವರುಣ ಅಬ್ಬರಿಸಿದ್ದಾನೆ.

Share This Article