ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ; ಜನಜೀವನ ಅಸ್ತವ್ಯಸ್ತ

Public TV
1 Min Read

– ತಲಕಾವೇರಿಯಲ್ಲಿ ಅಬ್ಬರಿಸಿದ ಮಳೆ; ಶನಿಮಹಾತ್ಮ ದೇಗುಲದ ಆವರಣದಲ್ಲಿ ಕಾಂಪೌಂಡ್‌ ಕುಸಿತ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಈ ನಡುವೆ ಇಂದು ಜಿಲ್ಲೆಯ ಹಲವೆಡೆ ಬೆಳಗ್ಗೆಯಿಂದಲೂ ಧಾರಾಕಾರವಾಗಿ ಮಳೆಯಾಗಿದೆ.

ಗ್ರಾಮೀಣ ಭಾಗದಲ್ಲಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ವಿರಾಜಪೇಟೆ ತಾಲ್ಲೂಕಿನ ಕಾಕೋಟು ಪರಂಬು ಮೂರ್ನಾಡು ಮಧ್ಯ ರಸ್ತೆಗೆ ಅಡ್ಡಲಾಗಿ ಬಿದ್ದ ಮರದಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಪಂಚಾಯಿತಿ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಮರ ತೆರವು ಕಾರ್ಯಚರಣೆ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಶನಿಮಹಾತ್ಮ ದೇವಾಲಯದ ಆವರಣದ ಕಾಂಪೌಂಡ್ ಕುಸಿದಿದ್ದು, ಮನೆಯ ಮಾಲೀಕರು ಅತಂಕಕ್ಕೆ ಒಳಗಾಗಿದ್ದಾರೆ. ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಮಧ್ಯಾಹ್ನದ ನಂತರ ಭಾರಿ ಮಳೆಯಾಗಿದ್ದು, ಕಾವೇರಿ ಭಕ್ತರು ಹಾಗೂ ಪ್ರವಾಸಿಗರು ತಲಕಾವೇರಿ ದ್ವಾರದ ಬಳಿ ನಿಂತು ಮಳೆಯಿಂದ ರಕ್ಷಣೆ ಪಡೆದರು.

ನಿರಂತರವಾಗಿ ಸುರಿದ ಮಳೆ ಪರಿಣಾಮದಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕೊಂಚಮಟ್ಟಿಗೆ ನೀರು ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಕತ್ತಲೆಯಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನಾಳೆಯಿಂದ ಜೂ.1 ರವರೆಗೆ ಕೊಡಗು ಜಿಲ್ಲೆಯಾದ್ಯಂತ ಭಾರೀ ಗಾಳಿ, ಮಳೆ ಹಾಗೂ ಕೆಲವೆಡೆ ಅತಿ ಹೆಚ್ಚು ಆಗುವ ಸಾಧ್ಯತೆ ಇದೆ.

Share This Article