ಭಾರೀ ಗಾಳಿ, ಮಳೆ – ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮರ ಬಿದ್ದು ವ್ಯಕ್ತಿ ಸಾವು

Public TV
1 Min Read

ಚಿಕ್ಕಮಗಳೂರು: ಗಾಳಿ-ಮಳೆ (Rain) ಅಬ್ಬರಕ್ಕೆ ಮರ (Tree) ಬಿದ್ದು ಸ್ಕೂಟಿಯಲ್ಲಿ (Scooter) ಮನೆಗೆ ಹೋಗುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಚಿಕ್ಕಹಳ್ಳ ಗ್ರಾಮದ ಬಳಿ ನಡೆದಿದೆ.

ಮೃತರನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ವೇಣುಗೋಪಾಲ್ ಒಂದೇ ಒಂದು ನಿಮಿಷ ಬೇಗ ಬಂದಿದ್ದರೆ ಮನೆ ಸೇರಿಕೊಳ್ಳುತ್ತಿದ್ದರು. ಆದರೆ ಮಳೆ ಜೊತೆಯೇ ಕಾದು ಕೂತಿದ್ದ ಜವರಾಯ ಒಂದೇ ಒಂದು ನಿಮಿಷದಲ್ಲಿ ವ್ಯಕ್ತಿ ಪ್ರಾಣವನ್ನು ಬಲಿ ಪಡೆದಿದ್ದಾನೆ.

ಉತ್ತರ ಕರ್ನಾಟಕ ಮೂಲದವರಾದ ವೇಣುಗೋಪಾಲ್ ಮೂಡಿಗೆರೆಯಲ್ಲಿ ಮದುವೆಯಾಗಿ ಇಲ್ಲೇ ವಾಸವಿದ್ದರು. ಮೂಡಿಗೆರೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿದ್ದ ವೇಣುಗೋಪಾಲ್ ಚಿಕ್ಕಹಳ್ಳ ಬಳಿ ಹೋಂ ಸ್ಟೇ ಕೂಡ ನಡೆಸುತ್ತಿದ್ದರು. ಹೋಂ ಸ್ಟೇಗೆ ತುಸು ದೂರ ಹೋಗಿದ್ದರೆ ಮನೆ ಸೇರುತ್ತಿದ್ದರು. ಆದರೆ ಒಂದೇ ಒಂದು ನಿಮಿಷದಲ್ಲಿ ಜೀವ ಹೋಗಿದೆ. ಭಾರೀ ಮಳೆ-ಗಾಳಿಗೆ ಒಂದರ ಹಿಂದೆ ಒಂದರಂತೆ ಸುಮಾರು 3 ಮರ ಬಿದ್ದ ಪರಿಣಾಮ ವೇಣುಗೋಪಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಿಗೆರೆ ಹಾಗೂ ಕಳಸ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಬಣಕಲ್ ಸಮೀಪ ರಶೀದ್ ಅವರ ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಮೂಡಿಗೆರೆ ಹಾಗೂ ಕಳಸ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಲವೆಡೆ ವಿದ್ಯುತ್ ಕಂಬಗಳ ಮೇಲೆ ರಸ್ತೆ ಬದಿಯ ಮರಗಳು ಮುರಿದು ಬಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದಂತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?

ಕಳೆದ 2-3 ವರ್ಷದ ಮಳೆಯಿಂದಾದ ಅನಾಹುತಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಬಂದಿಲ್ಲ. ಈ ವರ್ಷ ವರುಣದೇವ ಮತ್ಯಾವ ರೀತಿಯ ಅನಾಹುತ ಸೃಷ್ಠಿಸ್ತಾನೋ ಎಂದು ಮಲೆನಾಡಿಗರು ಆತಂಕದಿಂದಿದ್ದಾರೆ. ಇದನ್ನೂ ಓದಿ: ಇಂದಿನಿಂದ 3 ದಿನ ವಿಧಾನಸಭೆ ಅಧಿವೇಶನ

Share This Article