ಮನೆಯಿಂದ ಮಳೆ ನೀರು ಹೊರ ಹಾಕುವ ವೇಳೆ ಕರೆಂಟ್ ಶಾಕ್ – ವ್ಯಕ್ತಿ ದುರ್ಮರಣ

Public TV
2 Min Read

– ಮತ್ತಿಕೆರೆಯಲ್ಲಿ ಮನೆಗೆ ನುಗ್ಗಿದ ನೀರು
– ಶೇಷಾದ್ರಿಪುರಂನಲ್ಲಿ ಧರೆಗುರುಳಿದ ಮರ
– ಮಿನಿ ಕೆರೆಯಂತಾದ ರಸ್ತೆಗಳು

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಒಂದಲ್ಲ ಒಮದು ಅವಾಂತರಗಳು ಸೃಷ್ಟಿಯಾಗುತ್ತಿವೆ. ನಿನ್ನೆ ಸುರಿದ ಮಳೆಯಿಂದಾಗಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ವೆಂಕಟೇಶ್ (56) ಸಾವನ್ನಪ್ಪಿದ ವ್ಯಕ್ತಿ. ನಿನ್ನೆ ಸುರಿದ ಮಳೆಗೆ ವೆಂಕಟೇಶ್ ಮನೆಗೆ ನೀರು ನುಗ್ಗಿದೆ. ಈ ನೀರು ಹೊರಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೆಪಿ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಏರ್‌ಪೋರ್ಟ್‌ ಟರ್ಮಿನಲ್‍ಗೆ ನುಗ್ಗಿದ ಮಳೆ ನೀರು – ಟ್ರಾಫಿಕ್‍ನಲ್ಲಿ ಹೈರಾಣಾದ ಪ್ರಯಾಣಿಕರು

ಮನೆಯಲ್ಲಿ ಗಂಡ-ಹೆಂಡತಿ ಮಾತ್ರ ವಾಸವಿದ್ರು. ನಿನ್ನೆ ರಾತ್ರಿ ಒಂಬತ್ತು ಗಂಟೆ ವೇಳೆಗೆ ಕೆಲಸ ಮುಗಿಸಿ ವೆಂಕಟೇಶ್ ಮನೆಗೆ ವಾಪಸ್ ಬಂದಿದ್ದರು. ಮನೆ ರಸ್ತೆ ಮಟ್ಟದಿಂದ ಸುಮಾರು ನಾಲ್ಕು ಅಡಿಯಷ್ಟು ಹಳ್ಳಕ್ಕೆ ಮನೆ ಇರುವ ಕಾರಣ, ಮಳೆ ನೀರು ಚರಂಡಿ ನೀರು ಮನೆಯ ತುಂಬಾ ತುಂಬಿಕೊಂಡಿತ್ತು. ಆ ನೀರನ್ನು ಹೊರಹಾಕುವ ವೇಳೆ ದುರ್ಘಟನೆ ನಡೆದಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತ ಮತ್ತಿಕೆರೆಯ ಅಕ್ಕಿಯಪ್ಪ ಗಾರ್ಡನ್ ಬಳಿ ಮನೆಗೆ ನುಗ್ಗಿದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆಯಲ್ಲಿರೋ ಪಾತ್ರೆ ಸಾಮಾನು, ಅಡುಗೆ ವಸ್ತುಗಳೆಲ್ಲಾ ನೀರುಪಾಲಾಯ್ತು. ನೀರನ್ನು ಹೊರಹಾಕಲು ಜನರ ಹರಸಾಹಸ ಪಟ್ಟರು. ಮಳೆಯಿಂದಾಗಿ ನಗರದ ಹಲವೆಡೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಓಕಳೀಪುರಂನಿಂದ ಮಲ್ಲೇಶ್ವರದ ಕಡೆಗೆ ಸಾಗುವ ರಸ್ತೆಯಲ್ಲಿ ಕಂಪ್ಲೀಟ್ ಟ್ರಾಫಿಕ್ ಜಾಮ್ ಆಗಿತ್ತು. ಓಕಳೀಪುರಂನ ಕೃಷ್ಣ ಮಿಲ್ ಸಿಗ್ನಲ್‍ನಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ಉಂಟಾಗಿ ಟ್ರಾಫಿಕ್ ಕ್ಲಿಯರ್ ಮಾಡಲು ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟರು.

ಮಳೆ ಬಂದ್ರೆ ಬೆಂಗಳೂರಿನಲ್ಲಿ ಅವಾಂತರಗಳ ಸರಮಾಲೆ ಕಾಣತ್ತೆ. ಧಾರಾಕಾರ ಮಳೆಗೆ ಶೇಷಾದ್ರಿಪುರಂ ಶಿರೂರು ಪಾರ್ಕ್ ರಸ್ತೆಯಲ್ಲಿ ಮರವೊಂದು ಧರೆಗುರುಳಿದೆ. ಪರಿಣಾಮ ಮಂತ್ರಿಮಾಲ್ ಕಡೆಗೆ ಸಾಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಶಾಂತಿನಗರದ ಬಿಎಂಟಿಸಿ ಮತ್ತು ಕೆಎಸ್‍ಆರ್‍ಟಿಸಿ ಡಿಪೋ ರಸ್ತೆಯಲ್ಲಿ ಸರಿಸುಮಾರು 3 ಅಡಿಯಷ್ಟು ನೀರು ನಿಂತಿತ್ತು. ರಸ್ತೆ ಯಾವುದು ಮೋರಿ ಯಾವುದು ಅನ್ನೋದೇ ಗೊತ್ತಾಗದಂತಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *