ಉತ್ತರ ಪ್ರದೇಶದಲ್ಲಿ ವರುಣನ ಆರ್ಭಟ – ಸಿಡಿಲು, ಆಲಿಕಲ್ಲು ಮಳೆಗೆ 22 ಮಂದಿ ಸಾವು

Public TV
1 Min Read

– ಮೃತರ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯೋಗಿ

ನವದೆಹಲಿ: ಉತ್ತರ ಪ್ರದೇಶದಲ್ಲಿ (Uttar Pradesh) ಮಳೆ ಅಬ್ಬರಿಸುತ್ತಿದ್ದು, ಸಿಡಿಲು ಸಹಿತ ಭಾರೀ ಆಲಿಕಲ್ಲು ಮಳೆಗೆ 15 ಜಿಲ್ಲೆಗಳಲ್ಲಿ 22 ಜನರು ಸಾವನ್ನಪ್ಪಿದ್ದಾರೆ.

ಈ ಕುರಿತು ರಾಜ್ಯ ಪರಿಹಾರ ಆಯುಕ್ತರ ಕಚೇರಿ ಮಾಹಿತಿ ಬಿಡುಗಡೆ ಮಾಡಿದ್ದು, ಫತೇಪುರ್, ಅಜಂಗಢ ಜಿಲ್ಲೆಗಳಲ್ಲಿ ತಲಾ ಮೂವರು, ಫಿರೋಜಾಬಾದ್, ಕಾನ್ಪುರ್ ದೇಹತ್ ಮತ್ತು ಸೀತಾಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು, ಗಾಜಿಪುರ, ಗೊಂಡಾ, ಅಮೇಥಿ, ಸಂತ ಕಬೀರ್ ನಗರ ಮತ್ತು ಸಿದ್ಧಾರ್ಥ್ ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಬಲ್ಲಿಯಾ, ಕನೌಜ್, ಬಾರಾಬಂಕಿ, ಜೌನ್‌ಪುರ್ ಮತ್ತು ಉನ್ನಾವೊ ಜಿಲ್ಲೆಗಳಲ್ಲಿ ಸಿಡಿಲು ಬಡಿದು ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.ಇದನ್ನೂ ಓದಿ: ಬೆಂಗ್ಳೂರಿನಲ್ಲಿ ವರುಣನ ಅಬ್ಬರ – ರಾಜ್ಯದಲ್ಲಿ ಏ.17ರವರೆಗೆ ಮಳೆಯ ಮುನ್ಸೂಚನೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ಮೊತ್ತವನ್ನು ತಕ್ಷಣ ವಿತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇನ್ನೂ ಮಳೆಯಾದ ಪ್ರದೇಶಗಳ ಸಮೀಕ್ಷೆ ನಡೆಸಿ, ಬೆಳೆ ನಷ್ಟವನ್ನು ನಿರ್ಣಯಿಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ; ಸಿಡಿಲಿಗೆ ಮೂವರು ಬಲಿ

Share This Article