ಶಿವಮೊಗ್ಗದಲ್ಲಿ ಮಳೆ ಅಬ್ಬರ – ತೆಂಗಿನ ಮರ ಬಿದ್ದು ಕಾರು ಜಖಂ, ಮುರಿದು ಬಿದ್ದ ಸಾವಿರಾರು ಅಡಿಕೆ ಮರಗಳು

1 Min Read

ಶಿವಮೊಗ್ಗ: ಜಿಲ್ಲೆಯ (Shivamogga) ಹಲವೆಡೆ ಮಳೆಯ (Rain) ಅಬ್ಬರ ಜೋರಾಗಿದೆ. ಬಿಸಿಲಿನ ಬೇಗೆಗೆ ಕಾದು ಬೆಂಡಾಗಿದ್ದ ಶಿವಮೊಗ್ಗ ಈಗ ಕೂಲ್ ಕೂಲ್ ಆಗಿದೆ. ಸಂಜೆಯಿಂದ ಶುರುವಾದ ಸಿಡಿಲು – ಗುಡುಗು ಸಹಿತ ಮಳೆ ಕೆಲವೆಡೆ ಅವಾಂತರವನ್ನೂ ಸೃಷ್ಟಿಸಿದೆ.

ನಗರದ ಹೊರವಲಯದ ಸೋಗಾನೆಯ ಹೊಸೂರು ಭೋಜಪ್ಪನ ಕ್ಯಾಂಪ್‌ನಲ್ಲಿ ಗಾಳಿ ಮಳೆಗೆ ತೆಂಗಿನಮರ ಬಿದ್ದು ಕಾರು ಜಖಂ ಆಗಿದೆ. ನಾಲ್ಕು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.


ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯ ಹನುಮಂತಾಪುರ, ಮಲ್ಲಾಪುರ, ಮಲ್ಲಿಗೇನಹಳ್ಳಿ, ಬೋವಿ ಕಾಲೋನಿ, ಕೈಮರ ಸುತ್ತಮುತ್ತ ಭಾರೀ ಮಳೆಯಾಗಿದೆ. ಹಲವು ಗ್ರಾಮಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಗಾಳಿಗೆ ಹೆಂಚು, ಶೀಟ್‌ಗಳು ಹಾರಿಹೋಗಿವೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹಲವು ರೈತರ ತೋಟಗಳಲ್ಲಿ ಸಾವಿರಾರು ಅಡಿಕೆ ಮರಗಳು ಮುರಿದು ಬಿದ್ದಿವೆ. ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡಕ್ಕೂ ಸಹ ಭಾರೀ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Share This Article