ಬೆಂಗಳೂರು: ರಾಜ್ಯ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ನೆಲಮಂಗಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಜೋರಾಗಿದ್ದು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.
ಕೋಲಾರ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಭಾರಿ ಗಾಳಿಯಿಂದ ವಿದ್ಯುತ್ ಕಂಬ ಹಾಗೂ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿದೆ. ಈ ಬಗ್ಗೆ ಮಾಹಿತಿ ನೀಡಿದ್ದರೂ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಹೆಚ್ಚು ಜೋರಾಗಿ ಮಳೆ ಸುರಿದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆಯೂ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಬಿರುಗಾಳಿ ಗುಡುಗು ಸಹಿತ ಮಳೆಯಾಗಿದ್ದು ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತವಾಗಿವೆ. ಬಿರುಗಾಳಿ ಮಳೆಯ ಅಬ್ಬರಕ್ಕೆ ಮನೆಬಳಕೆ ವಸ್ತುಗಳು ಹಾರಿ ಹೋಗಿವೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಜೆ ವೇಳೆಗೆ ಆಲಿಕಲ್ಲು ಮಳೆಯಾಗಿದೆ. ಮಳೆಯಿಂದ ರಸ್ತೆಗಳಲ್ಲಿ ಉಕ್ಕಿ ಹರಿದಿತ್ತು. ದಿಢೀರ್ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.
ನೆಲಮಂಗಲದಲ್ಲೂ ಮಳೆಯಾಗಿದ್ದು, ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ದೊಡ್ಡೇರಿ ಹಾಗೂ ತಾಳೆಕೆರೆ ಬಳಿ ಘಟನೆ ಬೃಹತ್ ನೀಲಗಿರಿ ಮರಗಳು ಧರೆಗೆ ಉರುಳಿದೆ. ಪರಿಣಾಮ ಶನಿಮಹಾತ್ಮ ದೇವಾಲಯದ ಕಾಂಪೌಂಡ್, ಗೋಪುರ ಜಖಂ ಹಾಗೂ ಅಂಗಡಿ ಜಖಂಗೊಂಡಿದೆ.
ರಾತ್ರಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಸರಿಸುಮಾರು 600 ಮರಗಳು, 1200 ಮರದ ಕೊಂಬೆಗಳು, 210 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 50 ರಿಂದ 60 ವಾಹನಗಳಿಗೆ ಡ್ಯಾಮೆಜ್ ಆಗಿದೆ.
ಮುಂಗಾರು ಮಳೆ ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ಪ್ರವೇಶ ನೀಡಲಿದ್ದು, ಈ ಹೊತ್ತಲ್ಲೇ ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ ಎಂದು ಖಾಸಗಿ ಸಂಸ್ಥೆ ತಿಳಿಸಿದೆ.