ಕೊಪ್ಪಳ: ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕೆಲ ಕಡೆ ಉತ್ತಮ ಮಳೆಯಾಗಿದ್ದು, ರೈತರು ಸಂತೋಷಗೊಂಡಿದ್ದಾರೆ.
ಮಳೆಯ ಅವಾಂತರದಿಂದ ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದರಿಂದ ಸಂಪರ್ಕ ಕಳೆದುಕೊಂಡು ಮೂರು ಗ್ರಾಮಗಳ ಜನರು ಪರದಾಡಿದ್ದಾರೆ. ಯಲಬುರ್ಗಾ ತಾಲೂಕಿನ ಕೋಮಲಾಪುರ, ಅಡವಿಹಳ್ಳಿ, ಚಿತ್ತಾಪುರ ಗ್ರಾಮದ ಶಾಲೆಯ ಮಕ್ಕಳು ಮತ್ತು ಗ್ರಾಮಸ್ಥರು ಹಳ್ಳದ ನೀರು ಕಡಿಮೆಯಾಗುವರೆಗೆ ಐದು ಗಂಟೆಗಳ ಕಾಲ ಕಾದು ಕಾದು ಸುಸ್ತಾಗಿ ರಾತ್ರಿ 8ಕ್ಕೆ ಮನೆ ಸೇರಿದ್ದಾರೆ.
ಹಳ್ಳದ ನೀರಿನ ರಭಸಕ್ಕೆ ಲಾರಿ, ಆಟೋ, ಟಾಂ ಟಾಂ ಚಾಲಕರು ಹಳ್ಳದ ದಂಡೆಯಲ್ಲಿ ವಾಹನ ನಿಲ್ಲಿಸಿ ಅಧಿಕಾರಿಗಳನ್ನ ಶಪಿಸಿದ್ದಾರೆ. ಅಡವಿಹಳ್ಳಿ, ಕೋಮಲಾಪೂರ ಚಿತ್ತಾಪೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಎತ್ತರದ ಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಇತ್ತ ಕಡೆ ಗಮನ ಹರಿಸಿಲ್ಲ.
ಉನ್ನತ ಶಿಕ್ಷಣ ಸಚಿವರು ಮತ್ತು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರ ತವರು ಗ್ರಾಮ ತಳಕಲ್ ದಿಂದ ಕೇವಲ 2 ಕಿ.ಮೀ ದೂರವಿದೆ. ಈ ಎರೇಹಳ್ಳ ಸೇತುವೆ ನಿರ್ಮಿಸಲು ಇಚ್ಛಾಶಕ್ತಿ ಇಲ್ಲ. ನಮ್ಮ ಹಳ್ಳಿಗಳನ್ನು ಸಚಿವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.