ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ. ಮಳೆರಾಯನ ಆರ್ಭಟ ಜೋರಾಗಿದೆ. ಒಂದೆರೆಡು ನದಿಗಳಲ್ಲಿ ನೀರು ತುಂಬಿ ಡ್ಯಾಂಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮತ್ತೆ ಕೆಲವಡೆ ಭಾರೀ ಮಳೆ ಪ್ರವಾಹದ ಭೀತಿ ಜೊತೆ ಅವಾಂತರವನ್ನೇ ಸೃಷ್ಟಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕೃಷ್ಣಾ ನದಿಗೆ ಸುರಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ತಮಟೆ ಬಾರಿಸಿ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಕಲಬುರಗಿಯ ಜೇವರ್ಗಿ ಮತ್ತು ಅಫಜಲಪುರದಲ್ಲಿ ಭೀಮಾ ನದಿ ಆರ್ಭಟಿಸುತ್ತಿದ್ದು, ತಗ್ಗು ಪ್ರದೇಶದಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಜೇವರ್ಗಿ ತಾಲೂಕಿನ ನೇಲೋಗಿ ರಸ್ತೆ ಕಡಿತಗೊಂಡಿದೆ. ಕಾವೇರಿಕೊಳ್ಳದಲ್ಲಿ ಬರುವ ಕಬಿನಿ ಜಲಾಶಯ ಭರ್ತಿಯಾಗೋದಕ್ಕೆ ಕೇವಲ ನಾಲ್ಕಡಿಯಷ್ಟೇ ಬಾಕಿ. ಸದ್ಯ ನೀರಿನ ಮಟ್ಟ 2280 ಅಡಿಯಷ್ಟಿದೆ. ಡ್ಯಾಂನಿಂದ ಕಪಿಲ ನದಿಗೆ ಹೆಚ್ಚು ನೀರು ಬಿಡುಗಡೆಯಾಗೋ ಸಾಧ್ಯತೆ ಇದೆ.

ಬರಗಾಲದ ನಾಡೇ ಅಂತಾ ಕರೆಸಿಕೊಳ್ಳುವ ಚಾಮರಾಜನಗರದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಐದು ವರ್ಷಗಳ ಬಳಿಕ ಭರ್ತಿಯಾಗಿವೆ. ಇನ್ನೂ ಎರಡು ದಿನಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

Share This Article
Leave a Comment

Leave a Reply

Your email address will not be published. Required fields are marked *