ಹಬ್ಬದ ದಿನವೂ ದಾವಣಗೆರೆಯಲ್ಲಿ ಮಳೆ ಆರ್ಭಟ – ಕೆರೆಯಂತಾಗಿದೆ ಹರಿಹರ ಪಟ್ಟಣದ ರಸ್ತೆ

Public TV
1 Min Read

ದಾವಣಗೆರೆ: ಕಳೆದ 5 ದಿನಗಳಿಂದ ದಾವಣಗೆರೆಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿತ್ತು. ಇದರಿಂದ ಸಾವಿರಾರು ಜನರು ಮನೆಗಳನ್ನ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆದರೆ ಈ ಸರದಿ ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಎದುರಾಗಿದೆ.

ಇಂದು ಸುರಿದ ಭಾರಿ ಮಳೆಗೆ ಹರಿಹರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳು ಪರದಾಡುವಂತ ಸನ್ನಿವೇಶ ನಿರ್ಮಾಣವಾಗಿತ್ತು. ಸತತ 5 ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಂದು ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲ ನದಿಗಳಂತಾಗಿವೆ. ಇದರಿಂದ ವಾಹನ ಸವಾರರು ಹಾಗೂ ಜನರು ಜೀವಭಯದಲ್ಲಿ ಓಡಾಡುವ ಸಂದರ್ಭ ನಿರ್ಮಾಣವಾಗಿದೆ.

ವ್ಯಾಪಾರಸ್ಥರಿಗೆ ಲಾಸ್: ಈ ಬಾರಿ ವರುಣನ ಆರ್ಭಟದಿಂದ ದಸರಾ ಹಬ್ಬಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಏಕೆಂದರೆ ದಸರಾ ಹಬ್ಬಕ್ಕೆಂದು ಹಳ್ಳಿಗಳಿಂದ ಹೂ, ಬಾಳೆ, ಕಂದು ಹಾಗೂ ಕುಂಬಳಕಾಯಿ ತಂದು ಅದನ್ನ ಜೀವನ ಆಧಾರವಾಗಿ ಮಾಡಿಕೊಂಡಿದ್ದ ಜನರು, ಮಳೆಯಂದ ವ್ಯಾಪಾರ ಲಾಸ್ ಮಾಡಿಕೊಳ್ಳುತ್ತಿದ್ದಾರೆ. ಒಂದು ದಿನಕ್ಕಾದ್ದರು ವ್ಯಾಪಾರ ಮಾಡಿಕೊಳ್ಳುವ ದಾವಂತದಲ್ಲಿದ್ದ ವ್ಯಾಪಾರಸ್ಥರಿಗೆ ವರುಣ ಅಡ್ಡಗಾಲು ಹಾಕಿದ್ದಾನೆ. ಇದರಿಂದ ವ್ಯಾಪಾರ ಕುಂದಿದ್ದು, ವ್ಯಾಪಾರಸ್ಥರ ಮುಖ ಬಾಡಿದ ಸುಮವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *