ಬೆಂಗಳೂರಿನಲ್ಲಿ ಭಾರೀ ಮಳೆಗೆ ಧರೆಗುರುಳಿದ ಮರ, ಮುರಿದುಬಿದ್ದ ವಿದ್ಯುತ್ ಕಂಬ

Public TV
1 Min Read

– ಇಂದಿನಿಂದ ರಾಜ್ಯದಲ್ಲಿ ಬಿಜೆಪಿ ಬರಪ್ರವಾಸ

ಬೆಂಗಳೂರು: ಬುಧವಾರ ಸಂಜೆಯಿಂದ ರಾತ್ರಿವರೆಗೂ ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ನಗರದ ಸುಲ್ತಾನ್ ಪಾಳ್ಯ, ಮತ್ತು ಕಮರ್ಷಿಯಲ್ ಸ್ಟ್ರೀಟ್ ಸೇರಿ ಹಲವೆಡೆ ಮರಗಳು ಧರೆಗೆ ಉರುಳಿವೆ. ಹಲವೆಡೆ ವಿದ್ಯುತ್ ಕಂಬಗಳು ಮುರಿದುಬಿದ್ದು, ವಿದ್ಯುತ್ ತಂತಿಯೆಲ್ಲಾ ನೆಲಕ್ಕೆ ಬಿದ್ದು ಅಪಾಯಕ್ಕೆ ಆಹ್ವಾನ ಕೊಡುತ್ತಿವೆ. ಅದೃಷ್ಟವಶಾತ್, ವಿದ್ಯುತ್ ಸಂಪರ್ಕ ಇರದ ಕಾರಣ ಭಾರೀ ಅನಾಹುತ ತಪ್ಪಿದೆ.

ಸುಲ್ತಾನ್ ಪಾಳ್ಯದಲ್ಲಿ ಮರ ಬಿದ್ದ ರಭಸಕ್ಕೆ ಆಟೋವೊಂದು ಸಂಪೂರ್ಣ ಜಖಂಗೊಂಡಿದೆ. ಅಟೋದಲ್ಲಿ ಯಾರು ಇಲ್ಲದ ಕಾರಣ ಪ್ರಾಣ ಹಾನಿ ತಪ್ಪಿದೆ. ಧರೆಗೆ ಉರುಳಿದ ಮರಗಳ ತೆರವು ಕಾರ್ಯಾಚರಣೆಯನ್ನು ಸ್ಥಳೀಯರ ನೆರವಿನಿಂದ ಬಿಬಿಎಂಪಿ ಸಿಬ್ಬಂದಿ ಮಾಡ್ತಿದ್ದಾರೆ. ಭಾರೀ ಮಳೆಯ ಕಾರಣ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ರು. ರಾತ್ರಿ ಹನ್ನೆರಡಾದರೂ ಸ್ಲೋ ಮೂವಿಂಗ್ ಟ್ರಾಫಿಕ್ ಇತ್ತು.

ಬಿಜೆಪಿಯಿಂದ ಬರ ಪ್ರವಾಸ: ಇವತ್ತಿನಿಂದ ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸ ಮತ್ತು ಜನಸಂಪರ್ಕ ಅಭಿಯಾನ ಆರಂಭವಾಗಲಿದೆ. ಬಿಎಸ್ ವೈ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಬೆಳಗ್ಗೆ ತುಮಕೂರಿನ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಪ್ರವಾಸ ಆರಂಭಿಸಲಿದ್ದಾರೆ.

ಒಟ್ಟು ನಾಲ್ಕು ತಂಡಗಳಲ್ಲಿ ಬರ ಪ್ರವಾಸ ನಡೆಯಲಿದ್ದು, ಒಟ್ಟು 36ದಿನಗಳ ಕಾಲ ಬರ ಪ್ರವಾಸ ಕೈಗೊಳ್ಳಲಿದ್ದಾರೆ. ಬಿಎಸ್ ವೈ, ಅನಂತಕುಮಾರ್, ಶೆಟ್ಟರ್, ಈಶ್ವರಪ್ಪ ನೇತೃತ್ವದ ತಂಡಗಳು ಬರ ಪ್ರವಾಸ ಕೈಗೊಳ್ಳಲಿದ್ದಾರೆ. ಈ ನಡುವೆ ಬರ ಪ್ರವಾಸದಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಕೂಡ ಭಾಗವಹಿಸುವುದು ಖಚಿತವಾಗಿದ್ದು, ಎಷ್ಟರ ಮಟ್ಟಿಗೆ, ಯಾವ ರೀತಿ ಈಶ್ವರಪ್ಪ ಸ್ಪಂದಿಸುತ್ತಾರೆ ಅನ್ನೋ ಕುತೂಹಲವಿದೆ.

Share This Article
Leave a Comment

Leave a Reply

Your email address will not be published. Required fields are marked *