ರಣಭೀಕರ ಮಹಾ ಪ್ರವಾಹಕ್ಕೆ ತತ್ತರಿಸಿದ ಕರುನಾಡು- 33 ಮಂದಿ ಜಲರಾಕ್ಷಸನಿಗೆ ಬಲಿ

Public TV
4 Min Read

– 16 ಜಿಲ್ಲೆಗಳ 840 ಗ್ರಾಮಗಳಿಗೆ ಜಲದಿಗ್ಬಂಧನ

ಬೆಂಗಳೂರು: ಕಳೆದ ನಾಲ್ಕು ದಶಕಗಳಲ್ಲಿ ಹಿಂದೆಂದೂ ಕರ್ನಾಟಕ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಪ್ರಕೃತಿ ಶಾಂತವಾಗಿಲ್ಲ. ಒಂದ್ಕಡೆ ಮಳೆರಾಯ ಜಲರಕ್ಕಸನ ಅವತಾರವೆತ್ತಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ ನಾನು ಏನೂ ಕಮ್ಮಿ ಇಲ್ಲ ಎಂಬಂತೆ ಭೂ ತಾಯಿ ಬಾಯ್ಬಿಟ್ಟು ಒಂದೊಂದಾಗಿ ಎಲ್ಲವನ್ನೂ ಆಹುತಿ ಪಡೆಯುತ್ತಿದ್ದಾಳೆ.

ಬರೋಬ್ಬರಿ 16 ಜಿಲ್ಲೆಗಳ 80 ತಾಲೂಕುಗಳ 840 ಗ್ರಾಮಗಳು ಜಲದಿಗ್ಬಂಧನದಲ್ಲಿ ಸಿಲುಕಿವೆ. ಲಕ್ಷಾಂತರ ಮಂದಿ ಬದುಕು ಕಳೆದುಕೊಂಡಿದ್ದಾರೆ. ಒಂದು ವಾರದಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಎರಡೂವರೆ ಲಕ್ಷ ಮಂದಿಯನ್ನು ರಕ್ಷಿಸಲಾಗಿದೆ. 624 ಪರಿಹಾರ ಕೇಂದ್ರ ತೆರೆಯಲಾಗಿದ್ದು, 1.57 ಲಕ್ಷ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆದಿದೆ.

ಪ್ರವಾಹ ಪೀಡಿತ ಪ್ರದೇಶಗಳ 12,651 ಮನೆಗಳು ಸಂಪೂರ್ಣ ಹಾನಿಯಾಗಿವೆ. 3.22 ಲಕ್ಷ ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರಿದ್ದು, ಮಲೆನಾಡಿನಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಈ ವರ್ಷವೂ ಕೊಡಗು ಜಿಲ್ಲೆ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಭೂಕುಸಿತ ಹೆಚ್ಚಾಗಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಉತ್ತರದ ಜಲಾಶಯಗಳೆಲ್ಲಾ ತುಂಬಿದ್ದು, ದಕ್ಷಿಣ ಭಾಗದ ಡ್ಯಾಂಗಳೂ ಬಹುತೇಕ ತುಂಬುವ ಹಂತಕ್ಕೆ ಬಂದಿವೆ. ಆದರೆ ಪ್ರವಾಹ ಆವರಿಸಿರುವ ಬಹುತೇಕ ಕಡೆ ಕುಡಿಯುವ ನೀರು ಸಿಗುತ್ತಿಲ್ಲ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಕೆಲವೆಡೆ ಹೆಲಿಕಾಪ್ಟರ್‍ಗಳ ಮೂಲಕ ಆಹಾರ ವಿತರಣೆ ಮಾಡಲಾಗುತ್ತಿದೆ.

ಸಾವು-ನೋವು:
ರಣ ಮಳೆ ಮತ್ತು ರಣಭೀಕರ ಪ್ರವಾಹ ಕರ್ನಾಟಕಕ್ಕೆ ಸಾವಾಗಿ ಕಾಡುತ್ತಿದೆ. ಕಳೆದೊಂದು ವಾರದಲ್ಲಿ 33 ಮಂದಿ ಮಳೆ, ಪ್ರವಾಹದ ಅವಘಡಗಳಿಗೆ ಬಲಿಯಾಗಿದ್ದಾರೆ. ಇವತ್ತು ಮಲಪ್ರಭಾ ನದಿ ಅಬ್ಬರಕ್ಕೆ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಮನೆಯಲ್ಲಿ ಮಲಗಿದ್ದ ಮಹಿಳೆ ಕಳೆದ ರಾತ್ರಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬೆಳಗಾವಿಯ ಬಳ್ಳಾರಿ ನಾಲೆಗೆ ಎಮ್ಮೆ ಮೇಯಿಸಲು ಹೋಗಿದ್ದ ರೈತ ರಾಜಾರಾಮ್ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಹಳ್ಳ ದಾಟುತ್ತಿದ್ದ ಸಂತೋಷ್ ಎಂಬ ಯುವಕ ನೀರುಪಾಲಾಗಿದ್ದಾನೆ. ಕುದವಳ್ಳಿಯಲ್ಲಿ ರೈತ ಚಂದ್ರೇಗೌಡ ಎಂಬುವರು ಕೊಚ್ಚಿ ಹೋಗಿದ್ದಾರೆ. ಬಾಳೂರು ಹೊರಟ್ಟಿ ಬಳಿಯ ಕಾಫಿ ತೋಟದಲ್ಲಿ ಕೆಲಸ ಮಾಡ್ತಿದ್ದ ತಾಯಿ ಮಗ ಗುಡ್ಡ ಕುಸಿದು ಸಾವನ್ನಪ್ಪಿದ್ದಾರೆ. ಶುಕ್ರವಾರ ಮಡಿಕೇರಿಯಲ್ಲಿ ಏಳು ಮಂದಿ ಭೂಸಮಾಧಿಯಾಗಿದ್ದರು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹಿಸವಾಡಗಿ ಗ್ರಾಮದಲ್ಲಿ ಇಂಥಾದ್ದೇ ಅನಾಹುತ ಸಂಭವಿಸುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕೃಷ್ಣೆಯ ಪ್ರವಾಹಕ್ಕೆ ಸಿಲುಕಿ ಸಾವಿನಂಚಿನಲ್ಲಿದ್ದ 8 ಮಂದಿಯನ್ನು ಎನ್‍ಡಿಆರ್ ಎಫ್ ಪಡೆಗಳು ರಕ್ಷಿಸಿವೆ.

ಜಲಸ್ಫೋಟ:
ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟ್ ಮಧ್ಯೆ ಜಲಸ್ಫೋಟ ಆಗಿದೆ. ಚಾರ್ಮಾಡಿ ಘಾಟ್ ಬಳಿಯ ಬಂಜಾರುಮಲೆ ಎಂಬ ಗ್ರಾಮದಲ್ಲಿ ಕೊಡಗಿನ ಜೋಡುಪಾಲದ ಮಾದರಿ ಜಲಸ್ಫೋಟ ಆಗಿದ್ದು ಭೀಕರ ಸನ್ನಿವೇಶ ಎದುರಾಗಿದೆ. ಬೃಹತ್ ಮರಗಳು ಛಿದ್ರವಾಗಿ ಕೆಸರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಹೆದ್ದಾರಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕೊಚ್ಚಿ ಹೋಗಿದೆ. ಬಂಜಾರುಮಲೆ ಗ್ರಾಮದಲ್ಲಿ 50ಕ್ಕು ಹೆಚ್ಚು ಮನೆಗಳಿದ್ದು, ಎನ್‍ಡಿಆರ್ ಎಫ್ ತಂಡ ಹರಸಾಹಸ ಮಾಡಿ 85 ಮಂದಿಯನ್ನು ಪಾರು ಮಾಡಿದೆ. ಈ ಪೈಕಿ ಇಬ್ಬರು ಗರ್ಭಿಣಿಯರು ಮತ್ತು ಹಸುಗೂಸುಗಳನ್ನು ಹಗ್ಗದ ಮೂಲಕ ನದಿಯಿಂದ ಇನ್ನೊಂದು ಬದಿಗೆ ದಾಟಿಸಿದ್ದು ಅದ್ಭುತವಾಗಿತ್ತು. ಜೋಡುಪಾಲ ಮಾದರಿಯಲ್ಲಿ ಎನ್ ಡಿಆರ್ ಎಫ್ ತಂಡ ಬಂಜಾರುಮಲೆಯಲ್ಲಿ ಠಿಕಾಣಿ ಹೂಡಿದ್ದು, ಬೆಟ್ಟದ ಮೇಲಿನ ಜನರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಬಂಟ್ವಾಳ ಮತ್ತು ಮಂಗಳೂರಿನಲ್ಲಿ ನೆರೆ ಉಂಟಾಗಿದೆ. ಪಶ್ಚಿಮ ಘಟ್ಟದಲ್ಲಿ ಬಿದ್ದ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರಾ ನದಿಗಳು ತುಂಬಿಹರಿಯುತ್ತಿವೆ. ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತ ಆಗಿದೆ. ಬಂಟ್ವಾಳ, ನಾವೂರ, ಜಕ್ರಿಬೆಟ್ಟು, ಬಡ್ಡಕಟ್ಟೆ, ಸರಪಾಡಿ, ಅಜಿಲಮೊಗರು ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಪರಿಸ್ಥಿತಿ ಶೋಚನೀಯವಾಗಿದೆ. ಬಿ.ಸಿ.ರೋಡ್ ಬಳಿಯ ಜನಾರ್ದನ ಪೂಜಾರಿ ಅವರ ಮನೆ ಜಲಾವೃತವಾಗಿದ್ದು, ಅವರನ್ನು ಎನ್‍ಡಿಆರ್‍ಎಫ್ ರಕ್ಷಿಸಿದೆ. ಉಳ್ಳಾಲದ ಕಲ್ಲಾಪು ಎಂಬಲ್ಲಿ ವಯೋವೃದ್ಧೆಯನ್ನು ಯುಟಿ ಖಾದರ್ ದೋಣಿ ಮೂಲಕ ರಕ್ಷಿಸಿದ್ದಾರೆ. ಮೂಲ್ಕಿಯ ನಂದಿನಿ ನದಿಯಲ್ಲಿ ಪ್ರವಾಹ ಉಂಟಾಗಿ, ಮೂಲ್ಕಿ, ಕಿನ್ನಿಗೋಳಿ ಜಲಾವೃತವಾಗಿವೆ. ಅಗ್ನಿಶಾಮಕ ಸಿಬ್ಬಂದಿ ವೃದ್ಧರೊಬ್ಬರನ್ನು ತಲೆ ಮೇಲೆ ಹೊತ್ತು ತಂದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ. ಜಪ್ಪಿನಮೊಗರು, ಉಳ್ಳಾಲ ಕೂಡ ಜಲಾವೃತವಾಗಿವೆ.

ದೇಶದಲ್ಲಿ ಮಳೆ:
ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮಾತ್ರವಲ್ಲ ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ್‍ನಲ್ಲೂ ಪ್ರವಾಹ ನಿಲ್ತಿಲ್ಲ. ಅಲ್ಲೂ ಪ್ರಳಯ ಮಳೆ ಸೃಷ್ಟಿರುವ ಅನಾಹುತಗಳು ಒಂದೆರಡಲ್ಲ. ಕೇರಳ ರಾಜ್ಯದ ಮಲಪ್ಪುರಂನಲ್ಲಿ ಗುಡ್ಡ ಕುಸಿದು ಅಪ್ಪಳಿಸಿ ಮೂವರು ಸಾವನ್ನಪ್ಪಿದ್ದಾರೆ. ಮಗನೊಂದಿಗೆ ಇದ್ದ ತಾಯಿ ಮಣ್ಣಿನ ರಾಶಿಯಲ್ಲಿ ಕೊಚ್ಚಿಕೊಂಡು ಹೋದ್ರೆ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯಪ್ರದೇಶದ ಧರ್‍ನಲ್ಲಿ ಸಿಮೆಂಟ್ ಸಾಗಿಸ್ತಿದ್ದ ಟ್ರಕ್ ಪ್ರವಾಹದಲ್ಲಿ ಮಕ್ಕಳಾಟಿಕೆ ರೀತಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಲ್ಲಿ ಟಿಕ್‍ಟಾಕ್ ಮಾಡಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿದ್ದವನನ್ನ ಗೆಳೆಯರು ರಕ್ಷಿಸಿದ್ದಾರೆ. ಇನ್ನು ಉಜ್ಜೈನಿಯಲ್ಲಿ ಶಿಪ್ರ ನದಿ ಅಪಾಯದ ಮಟ್ಟ ಮೀರಿ ಹರೀತಿದೆ. ಪ್ರವಾಹದಲ್ಲಿ ವ್ಯಕ್ತಿಯೋರ್ವ ಬೈಕ್ ಓಡಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾನೆ. ಉತ್ತರಾಖಂಡ್‍ನ ಮೇಘಸ್ಫೋಟದಿಂದಾಗಿ ಬದುಕು ಮೂರಾಬಟ್ಟೆ ಆಗಿದೆ. ಕಳೆದ ರಾತ್ರಿಸುರಿದ ಭಾರೀ ಮಳೆಗೆ ಜೀವನ ಸಾಗಾಟಕ್ಕಿದ್ದ ಅಂಗಡಿ, ಮನೆಗಳು ಅಲಕಾನಂದ ನದಿಯ ಪಾಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *