ಆಲಿಕಲ್ಲು ಸಹಿತ ಭಾರೀ ಮಳೆ – ರಾಯಚೂರಿನಲ್ಲಿ ಸಿಡಿಲಿಗೆ ಓರ್ವ ಸಾವು

Public TV
1 Min Read

ರಾಯಚೂರು/ಬೀದರ್: ರಾಜ್ಯದ ಕೆಲವು ಕಡೆ ಜೋರಾಗಿ ಮಳೆರಾಯ ಅಬ್ಬರಿಸಿದ್ದು, ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಿಂಚೇರಿತಾಂಡಾದ ಬಳಿ ನಡೆದಿದೆ.

ಜಿಲ್ಲೆಯಲ್ಲಿ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತಿದೆ. ಆದರೆ ಸೋಮನಾಥ್ (25) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಡಿದ ಸಿಡಿಲಿನ ಆಘಾತದಿಂದ ಸಾವು ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಲಿಂಗಸುಗೂರು, ಸಿರವಾರ ತಾಲೂಕಿನಲ್ಲಿ ಹೆಚ್ಚು ಮಳೆ ಸುರಿಯುತ್ತಿದ್ದು, ಗಾಳಿ ಸಹಿತ ಸುರಿದ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದುವರೆಗೆ ಸುಮಾರು 8,135 ಹೆಕ್ಟರ್ ಬೆಳೆ ಹಾನಿಯಾಗಿದ್ದು. ಭತ್ತ, ಪಪ್ಪಾಯ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ.

ಯಾದಗಿರಿ ಜಿಲ್ಲೆಯಾದ್ಯಂತ ಗಾಳಿ ಸಹಿತ ಧಾರಕಾರ ಮಳೆಯಾಗುತ್ತಿದೆ. ಶಹಪುರ, ಸುರಪುರದಲ್ಲಿ ಆಲಿಕಲ್ಲು ಮಳೆಯೊಂದಿಗೆ ಗುಡುಗು, ಸಿಡಿಲಿನ ಅಬ್ಬರ ಜೋರಾಗಿದೆ. ಬಿರು ಬಿಸಿಲಿನ ಧಗೆಯಿಂದ ತತ್ತರಿಸಿದ ಜನತೆಗೆ ಮಳೆರಾಯ ತಂಪೆರೆದಿದ್ದಾರೆ.

ಇನ್ನೂ ಬಿರು ಬಿಸಿಲಿನಿಂದ ಕೆಂಗೆಟ್ಟಿದ್ದ ಗಡಿ ಜಿಲ್ಲೆಯ ಬೀದರ್ ಜನರಿಗೆ ಇಂದು ಮಳೆರಾಯ ತಂಪೆರೆದಿದ್ದಾನೆ. ಸತತ ಒಂದು ಗಂಟೆಯಿಂದ ಗುಡುಗು, ಸಿಡಿಲು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ರೈತರು ಹಾಗೂ ಜನರು ಹರ್ಷಗೊಂಡಿದ್ದಾರೆ. ಜಿಲ್ಲೆಯ ಬಹುತೇಕ ಕುಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇಂದು ವರುಣ ಆಗಮನದಿಂದಾಗಿ ಎಲ್ಲರು ಸಂತೋಷಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *