ಕಳೆದ 15 ವರ್ಷದಲ್ಲಿ ಇಂತಹ ಗಾಳಿ, ಮಳೆ ನೋಡಿಲ್ಲ- ಉಡುಪಿಯ ಉದ್ಯಾವರ, ಪಿತ್ರೋಡಿ ತತ್ತರ

Public TV
1 Min Read

ಉಡುಪಿ: ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಮರಗಳು ನೆಲಕ್ಕುರುಳಿ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕಟಪಾಡಿ, ಉದ್ಯಾವರ, ಪಿತ್ರೋಡಿಯಲ್ಲಿ ಮಳೆರಾಯ ಅಬ್ಬರಿಸಿದ್ದು ಮನೆ, ಅಂಗಡಿ, ಬಸ್ ನಿಲ್ದಾಣದ ಮೇಲೆ ಮರಗಳು ಉರುಳಿದೆ.

ವಿಪರೀತ ಗಾಳಿ ಬೀಸಿದ್ದು ವಿದ್ಯುತ್ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿದೆ. ಮೆಸ್ಕಾಂ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ. ಕಳೆದ ರಾತ್ರಿ ಸುರಿದ ಸಿಡಿಲು ಮಳೆಗೆ ಹಿರಿಯಡ್ಕ, ಕಾಪು, ಅಲೆವೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಎರಡು ಮನೆಗಳ ಮೇಲೆ ಮರ ಉರುಳಿದೆ.

ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ರಸ್ತೆಗೆ ಬಿದ್ದ ಮರಗಳನ್ನು ಗ್ರಾಮಸ್ಥರೇ ತೆರವು ಮಾಡಿದರು. ಗ್ರಾಮೀಣ ಭಾಗದಲ್ಲಿ ಕಳೆದ 48 ಗಂಟೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ.

ಸ್ಥಳೀಯ ಗ್ರಾಮಸ್ಥ ಸಂಜೀವ ಪಿತ್ರೋಡಿ ಪಬ್ಲಿಕ್ ಟಿವಿ ಜೊತೆ ಮಾತಾಡಿ, ಕಳೆದ 15 ವರ್ಷದಲ್ಲಿ ಇಂತಹ ಗಾಳಿ ಮಳೆ ನೋಡಿಲ್ಲ. ರಾತ್ರಿ ಮೂರು ಗಂಟೆಗೆ ಸಿಡಿಲಿನ ಸರಣಿಯೇ ಆಗಿದೆ. ಮರಗಳು ರಸ್ತೆ, ಮನೆ ಮೇಲೆ ಬಿದ್ದು ಇಡೀ ಗ್ರಾಮಕ್ಕೆ ಆತಂಕವಾಗಿದೆ. ಬೆಳಗ್ಗೆ ಎದ್ದಕೂಡಲೇ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿದೆವು. ಬಸ್ ಸ್ಟ್ಯಾಂಡ್ ಮೇಲೆ ಮರ ಬಿದ್ದಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಹಾರ ಘೋಷಿಸಬೇಕು ಅಂತ ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *