ರಾಜ್ಯದೆಲ್ಲೆಡೆ ಹಿಂಗಾರು ಮಳೆಯ ಆರ್ಭಟ- ಎಲ್ಲೆಲ್ಲಿ ಏನೇನಾಗಿದೆ?

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಆರ್ಭಟ ಜೋರಾಗಿದೆ. ಸೋಮವಾರದಿಂದ ಸುರಿಯುತ್ತಿರೋ ಮಳೆಗೆ (Rain In Karnataka) ಸಿಲಿಕಾನ್ ಸಿಟಿ ತತ್ತರಿಸಿದೆ.

ಬೈಯ್ಯಪ್ಪನಹಳ್ಳಿ ರಸ್ತೆಯಲ್ಲಿ ಮೊಳಕಾಲುದ್ದ ನೀರುನಿಂತು ಸವಾರರು ಪರದಾಡಿದ್ದಾರೆ. ಯಲಹಂಕ ಕೆರೆ ಕೋಡಿಬಿದ್ದು ಕೋಗಿಲು ಸರ್ಕಲ್, ಕೇಂದ್ರೀಯ ಅಪಾರ್ಟ್‍ಮೆಂಟ್, ಏರ್‍ಪೋರ್ಟ್ ರೋಡ್ ಜಲಾವೃತವಾಗಿದೆ. ಹಲವು ಕಾರುಗಳು ಮುಳುಗಡೆ ಆಗಿವೆ. ಕುರುಬರಳ್ಳಿಯ ತಗ್ಗುಪ್ರದೇಶದಲ್ಲಿರುವ ಮನೆಗಳು ಜಲಾವೃತವಾಗಿ ಜನರ ಒದ್ದಾಡಿದ್ದಾರೆ. ಜಿಟಿ ಮಾಲ್ ಹೀಂಭಾಗ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದೆ.

ಗಾಳಿ ಆಂಜನೇಯ ದೇಗುಲದ ಆವರಣ ಎಂದಿನಂತೆ ಮೋರಿ ನೀರಿಂದ ತುಂಬಿಹೋಗಿತ್ತು. ಯಲಹಂಕದಲ್ಲಿ ಗರಿಷ್ಠ 164 ಮಿಲಿಮೀಟರ್ ಮಳೆ ಆಗಿದೆ. ಇಂದು ಬೆಳಗ್ಗೆಯಿಂದ್ಲೇ ಮೋಡಕವಿದ ವಾತಾವರಣ ಇದ್ದು, ಆಗಾಗ ಮಳೆ ಆಗುತ್ತಲೇ ಇತ್ತು. ರಾಜ್ಯದ ವಿವಿಧೆಡೆಯೂ ಭಾರೀ ಮಳೆ ಆಗಿದೆ. ಕಡೂರಿನ ಮಚ್ಚೇರಿಯಲ್ಲಿ ಗೋಡೆ ಕುಸಿದು ವೃದ್ಧರೊಬ್ಬರು ಬಲಿ ಆಗಿದ್ದಾರೆ. ಚನ್ನಗಿರಿಯ ದೊಡ್ಡಟ್ಟಿಬಳಿ ತುಂಬಿ ಹರಿದ ಹಳ್ಳ ದಾಟೋ ದುಸ್ಸಾಹಸ ಮಾಡಿ ಕೊಚ್ಚಿ ಹೋಗ್ತಿದ್ದ ಶಿಕ್ಷಕರೊಬ್ಬರನ್ನು ರಕ್ಷಿಸಲಾಗಿದೆ.

ಬೈಕ್‍ಗಾಗಿ ಹುಡುಕಾಟ ನಡೆದಿದೆ. ಕೆಆರ್ ಪೇಟೆ ಬಸ್ ನಿಲ್ದಾಣ ಜಲಾವೃತವಾಗಿದೆ. ತುಮಕೂರಿನ ಹಲವು ರಸ್ತೆಗಳು ಕೆರೆಯಂತಾಗಿದ್ವು.. ಮಂಡ್ಯದ ಹುಲಿಕೆರೆ ಬಳಿ ವಿಸಿ ನಾಲೆಯ ಸುರಂಗ ಕುಸಿದಿದ್ದು, ಮನೆಯೊಂದು ಅಪಾಯದ ಅಂಚಿನಲ್ಲಿದೆ. ಕೊಪ್ಪಳ, ಮಡಿಕೇರಿ ಸೇರಿ ಹಲವೆಡೆ ಬೆಳೆ ಹಾನಿ ಸಂಭವಿಸಿದೆ.

ರಾಮನಗರದ ಚಾಕನಹಳ್ಳಿಯಲ್ಲಿ 166 ಮಿಲಿಮೀಟರ್, ಮೈಸೂರು ನಗರದಲ್ಲಿ 148 ಮಿಲಿಮೀಟರ್, ಕೋಲಾರದ ಚೌಡೇನಹಳ್ಳಿಯಲ್ಲಿ 135 ಮಿಲಿಮೀಟರ್, ಮಂಡ್ಯದ ಮಲ್ಲಿಗೆರೆಯಲ್ಲಿ 134 ಮಿಲಿಮೀಟರ್, ಚಿಕ್ಕಬಳ್ಳಾಪುರದ ಗೆದರೆಯಲ್ಲಿ 130 ಮಿಲಿಮೀಟರ್, ತುಮಕೂರಿನ ತಿಮ್ಲಾಪುರದಲ್ಲಿ 128 ಮಿಲಿಮೀಟರ್ ಮಳೆಯಾಗಿದೆ.

Share This Article