ಬೆಳಗಾವಿ/ಧಾರಾವಾಡ: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮಳೆಯ ನೀರಿಗೆ ನೆನೆದು ಮನೆಯ ಮೇಲ್ಛಾವಣಿ ಕುಸಿದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಕೆ. ಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಳೆಯ ನೀರಿಗೆ ನೆನೆದು ಮನೆಯ ಮೇಲ್ಛಾವಣಿ ಕುಸಿದಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಇರಪ್ಪ ಕಮ್ಮಾರ ಅವರಿಗೆ ಈ ಮನೆ ಸೇರಿದ್ದು, ಮೇಲ್ಛಾವಣಿ ಕುಸಿಯುವಾಗ ಜನರು ಪಕ್ಕದ ಮನೆಯಲ್ಲಿ ಇದ್ದರು. ಈ ಗ್ರಾಮದಲ್ಲಿ 5ಕ್ಕೂ ಹೆಚ್ಚು ಮನೆ ಕುಸಿದಿದೆ. ಇದನ್ನು ಓದಿ: 100 ವರ್ಷದಲ್ಲಿ 5ನೇ ಬಾರಿ ಕಡಿಮೆ ಮಳೆ ದಾಖಲು
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಭಾರಿ ಮಳೆಗೆ ದೂದಗಂಗಾ ಹಾಗೂ ವೇದಗಂಗಾ ನದಿಗಳು ತುಂಬಿ ಹರಿಯುತ್ತಿದೆ. ನದಿ ತುಂಬಿದ ಹಿನ್ನೆಲೆಯಲ್ಲಿ ಮೂರು ಗ್ರಾಮಗಳ ಕೆಳ ಹಂತದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಇದನ್ನು ಓದಿ: ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಸೇತುವೆ ಕುಸಿದು ಬಿತ್ತು – ವಿಡಿಯೋ
ಕಾರದಗಾ – ಭೋಜ ಹಾಗೂ ಬಾರವಾಡ- ಕುನ್ನೂರ ಗ್ರಾಮಗಳ ಸಂಪರ್ಕ ಸೇತುವೆ ದೂದಗಂಗಾ ನದಿಗೆ ಅಡ್ಡಲಾಗಿ ಇದೆ. ವೇದಗಂಗಾ ನದಿಗೆ ಅಡ್ಡಲಾಗಿ ಇರುವ ಭೋಜವಾಡಿ-ಕೂನ್ನೂರ ಗ್ರಾಮಗಳ ಸಂಪರ್ಕ ಸೇತುವೆಯೂ ಮುಳುಗಡೆ ಆಗಿದೆ. ಕಳೆದ ಮೂರು ತಿಂಗಳಿನಿಂದ ದೂದಗಂಗಾ ನದಿ ಬತ್ತಿ ಬರಿದಾಗಿತ್ತು.
ಧಾರವಾಡ ಜಿಲ್ಲೆಯಲ್ಲಿ ಸತತ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಮನೆ ಕುಸಿತವಾಗಿದೆ. ಅಶೋಕ್ ದುರಣ್ಣವರ ಎಂಬವರ ಮನೆ ಕುಸಿದಿದೆ. ಇಂದು ಬೆಳಗಿನ ಜಾವ ಎಲ್ಲರೂ ಇದ್ದಾಗಲೇ ಮನೆ ಕುಸಿದಿದೆ. ಮನೆಯಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.