ವೈದ್ಯರು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತಿರುವ ದೇವರು: ಪ್ರಧಾನಿ ಮೋದಿ

Public TV
2 Min Read

– ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿದರೆ ಕಠಿಣ ಕ್ರಮ

ನವದೆಹಲಿ: ಬಿಳಿ ಸಮವಸ್ತ್ರ ತೊಟ್ಟು ನಮಗಾಗಿ ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು, ನರ್ಸ್‍ಗಳು, ಇತರೆ ವೈದ್ಯಕೀಯ ಸಿಬ್ಬಂದಿ ನಮ್ಮ ಪಾಲಿನ ದೇವರು. ಅವರ ಜೀವವನ್ನು ಪಣಕ್ಕಿಟ್ಟು ನಮಗಾಗಿ ಅವರೆಲ್ಲಾ ದುಡಿಯುತ್ತಿದ್ದಾರೆ. ಅವರ ವಿರುದ್ಧ ಹಲ್ಲೆ ನಡೆಸುವುದಾಗಲಿ, ದೌರ್ಜನ್ಯ ಎಸೆಗುವುದಾಗಲಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ.

ವಾರಣಾಸಿ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಾರಣಾಸಿಯ ಆಯ್ದ ಮತದಾರರ ಜೊತೆ ಮೋದಿ ಸಂವಾದ ನಡೆಸಿದರು. ಈ ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ದೇಶಕ್ಕಾಗಿ, ಎಲ್ಲರ ಜೀವ ಉಳಿಸಲು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಳಿ ಸಮವಸ್ತ್ರದಲ್ಲಿರುವ ದೇವರು. ಎಲ್ಲರನ್ನೂ ಸೋಂಕಿನಿಂದ ಉಳಿಸಲು ದುಡಿಯುತ್ತಿದ್ದಾರೆ. ಅವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ನಾಗರಿಕರಲ್ಲಿ ವಿನಂತಿ ಮಾಡುತ್ತೇನೆ ಒಂದು ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಯಾರಾದರು ತಪ್ಪಾಗಿ ನಡೆದುಕೊಂಡರೆ ಅವರಿಗೆ ನೀವು ಬುದ್ಧಿ ಹೇಳಿ. ಪರಿಸ್ಥಿತಿಯನ್ನು ವಿವರಿಸಿ ಎಂದು ಮೋದಿ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದ ಜೊತೆ ವೈದ್ಯಕೀಯ ಕ್ಷೇತ್ರ ನಿಂತಿದೆ. ವೈದ್ಯರು, ನರ್ಸ್‍ಗಳು, ಇತರೆ ವೈದ್ಯಕೀಯ ಸಿಬ್ಬಂದಿ ದಿನಕ್ಕೆ 18 ಗಂಟೆಗಿಂತ ಹೆಚ್ಚು ಸಮಯ ದುಡಿಯುತ್ತಿದ್ದಾರೆ. 2ರಿಂದ 3 ಗಂಟೆ ನಿದ್ರೆ ಮಾಡಿ ಮತ್ತೆ ಕೆಲಸಕ್ಕೆ ಹಾಜಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ಪೊಲೀಸ್ ಇಲಾಖೆ ಹೊರಗೆ ಹಗಲು ರಾತ್ರಿ ನಮ್ಮ ಒಳಿತಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕ ಸಮಾಜದ ಜನರು ಬಡವರಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಇವರಿಗೆ ನಾವು ಸೆಲೂಟ್ ಹೊಡಿಯಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಧನ್ಯವಾದ ಎಂದು ಮೋದಿ ಶ್ಲಾಘಿಸಿದ್ದಾರೆ.

ಕೊರೊನಾ ವೈರಸ್ ಸೋಂಕನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಿರಿ. ಅಥವಾ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆ ತಿಳಿಸಿ. ಮನೆಯಲಿಯೇ ಇರಿ. ಕೊರೊನಾ ವೈರಸ್‍ಗೆ ಇನ್ನೂ ಔಷಧಿ ಸಿಕ್ಕಿಲ್ಲ. ವೈದ್ಯರು, ವಿಜ್ಞಾನಿಗಳು ಔಷಧಿ ಕಂಡುಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದಷ್ಟು ಬೇಗ ಔಷಧಿಯನ್ನು ಕಂಡುಹಿಡಿಯಲಿದ್ದಾರೆ. ದಯವಿಟ್ಟು ಗಾಳಿ ಮಾತುಗಳಿಗೆ, ಮೂಡನಂಬಿಕೆಗಳಿಗೆ ಕಿವಿಗೊಡಬೇಡಿ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿಸಿ, ಚಿಕಿತ್ಸೆ ಪಡೆಯಿರಿ ಎಂದು ಪ್ರಧಾನಿ ಅವರು ಮನವಿ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಮಾರ್ಚ್ 22ರಂದು ಜನತಾ ಕರ್ಫ್ಯೂ ದಿನದಂದು ದೇಶವಾಸಿಗಳು ಬೆಂಬಲ ನೀಡಿದಕ್ಕೆ ಧನ್ಯವಾದ. ಜೊತೆಗೆ ಸಂಜೆ 5 ಗಂಟೆಗೆ ಮನೆಯಿಂದ ಹೊರಬಂದು ಈ ಕಠಿಣ ಪರಿಸ್ಥಿತಿಯಲ್ಲಿ ನಮಗಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ, ಪೌರಕಾರ್ಮಿಕರಿಗೆ ನೀವು ಅಭಿನಂದಿಸಿದ್ದಕ್ಕೂ ಧನ್ಯವಾದ ಎಂದು ಮೋದಿ ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *