ಕೊರೊನಾ ಶಂಕಿತನ ಕುಟುಂಬಸ್ಥರಿಂದ ತರಾಟೆ- ಪೊಲೀಸ್ರ ಮೊರೆ ಹೋದ ಅಧಿಕಾರಿಗಳು

Public TV
1 Min Read

ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಶಂಕಿತ ಕೊರೊನಾ ವ್ಯಕ್ತಿಯ ಮನೆಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಶಂಕಿತ ವ್ಯಕ್ತಿ ಮನೆಯಲ್ಲಿರುವ ಶಂಕೆ ವ್ಯಕ್ತಪಡಿಸಿ ಆರೋಗ್ಯ ಅಧಿಕಾರಿಗಳು ಆತನ ಮನೆಗೆ ಇಂದು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಶಂಕಿತನ ಕುಟುಂಬಸ್ಥರು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಅವನು ಮನೆಯಲ್ಲಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಜನರು ಜಮಾಯಿಸಿ ಇಲಾಖೆ ಸಿಬ್ಬಂದಿಯನ್ನು ವಾಪಸ್ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸತ್ತ ಆರೋಗ್ಯಾಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ.

ನಗರದ ಅಂತರಾಷ್ಟ್ರೀಯ ಏರ್ ಪೋರ್ಟಿನಲ್ಲಿ ಶಂಕಿತ ಕೊರೊನಾ ಪ್ರಯಾಣಿಕನೊಬ್ಬ ಪತ್ತೆಯಾಗಿದ್ದನು. ಪ್ರಯಾಣಿಕ ಭಾನುವಾರ ತಡ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದನು. ಹಾಗೆಯೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸ್ಕ್ರೀನಿಂಗ್ ವೇಳೆ ಟೆಂಪರೇಚರ್ ನಲ್ಲಿ ಬಯಲಾಗಿತ್ತು. ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಯಾಣಿಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ವೇಳೆ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ತೆಗೆದು ಲ್ಯಾಬ್‍ಗೆ ರವಾನಿಸಿದ್ದು, ಕೊರೊನಾ ಇರೋ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಆತನನ್ನು ಐಸೋಲೇಶನ್ ವಾರ್ಡ್‍ಗೆ ಸಿಬ್ಬಂದಿ ರವಾನಿಸಿದ್ದರು. ಆದರೆ ಆತ ರಾತ್ರೋರಾತ್ರಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು, ಕರಾವಳಿ ಮಂದಿಯಲ್ಲಿ ಆತಂಕ ಹುಟ್ಟಿಸಿದೆ. ಈ ಸಂಬಂಧ ಆರೋಗ್ಯಾಧಿಕಾರಿ ಕೂಡಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಮಂಗಳೂರು ಆಸ್ಪತ್ರೆಯಿಂದ ಎಸ್ಕೇಪ್ ಆದ ವ್ಯಕ್ತಿಯನ್ನು ಹುಡುಕಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *