‘ಜನಾಂಗಕ್ಕೆ ಮುಜುಗರವಾದರೂ, ಪಕ್ಷಕ್ಕೆ ನಿಷ್ಠನಾಗಿರುತ್ತೇನೆ’- ಶ್ರೀರಾಮುಲು

Public TV
1 Min Read

ನವದೆಹಲಿ: ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ತೀವ್ರ ನಿರಾಸೆಯಾಗಿದೆ. ಪಕ್ಷದಲ್ಲಿನ ಆಂತರಿಕ ಬೆಳವಣಿಗಳ ಬಳಿಕ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡುವುದು ಅನುಮಾನ ಎನ್ನಲಾಗುತ್ತಿದೆ.

ಈಗಾಗಲೇ ಮೂವರು ಡಿಸಿಎಂಗಳಿದ್ದು ಮತ್ತೆ ಡಿಸಿಎಂ ಸ್ಥಾನ ಸೃಷ್ಟಿ ಅನುಮಾನ ಎನ್ನಲಾಗುತ್ತಿದೆ. ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಿದಲ್ಲಿ ಶಾಸಕ ರಮೇಶ್ ಜಾರಕಿಹೋಳಿ ಕಡೆಯಿಂದಲೂ ಡಿಸಿಎಂ ಸ್ಥಾನದ ಬೇಡಿಕೆ ಹೆಚ್ಚಾಗಲಿದೆ. ಒಂದೇ ಸಮುದಾಯದ ಇಬ್ಬರಿಗೆ ಡಿಸಿಎಂ ನೀಡಲು ಸಾಧ್ಯವಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರ. ಹೀಗಾಗಿ ಡಿಸಿಎಂ ಸ್ಥಾನ ಸದ್ಯ ನೀಡಲು ಸಾಧ್ಯವಿಲ್ಲ ಎಂದು ಶ್ರೀರಾಮುಲುಗೆ ಸಂದೇಶ ರವಾನಿಸಲಾಗಿದೆ.

ಈ ಕುರಿತು ದೆಹಲಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸಚಿವ ಶ್ರೀರಾಮುಲು, ನನ್ನ ಸಮುದಾಯಕ್ಕೆ ಮುಜಗರವಾದರೂ ಪರವಾಗಿಲ್ಲ ಡಿಸಿಎಂ ಹುದ್ದೆಯನ್ನು ಬಹಿರಂಗವಾಗಿ ಕೇಳಿ ಪಕ್ಷಕ್ಕೆ ಮುಜುಗರ ಮಾಡಲ್ಲ. ನಾನು ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದರು.

ನಮ್ಮ ಸಮುದಾಯದ ಜನರು ನನ್ನ ಮೇಲಿನ ಪ್ರೀತಿಯಿಂದ ಹೋರಾಟ ಮಾಡುತ್ತಿದ್ದಾರೆ. ಹೋರಾಟ ಮಾಡಬೇಡಿ ಎಂದು ನಾನು ಹೇಳಲ್ಲ. ನಾನು ಎಷ್ಟೇ ಹೇಳಿದರೂ ಅವರು ನನ್ನ ಮಾತು ಕೇಳಲ್ಲ. ನನಗೆ ಡಿಸಿಎಂ ನೀಡದಿದ್ದರೆ ಸಮುದಾಯಕ್ಕೆ ಮುಜುಗರ ಆಗುತ್ತೆ ಎಂಬ ವಿಚಾರ ಸತ್ಯ. ನನಗೆ ಡಿಸಿಎಂ ಹುದ್ದೆ ಸಿಗದಿದ್ದರೆ ಸಮುದಾಯ ತ್ಯಾಗ ಮಾಡಬೇಕು. ಪಕ್ಷದಲ್ಲಿ ನಿಷ್ಠಾವಂತನಾಗಿ ಕೆಲಸ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಮೇಶ್ ನನ್ನ ಸೋದರನಿದ್ದಂತೆ. ನಮ್ಮ ಸಮುದಾಯದ ನಡುವೆ ಸ್ಪರ್ಧೆ ಮಾಡಲ್ಲ ಹಾಗೂ ಅವರಿಗೆ ಡಿಸಿಎಂ ಸ್ಥಾನ ನೀಡಬೇಡಿ ಎಂದೂ ನಾನು ಹೇಳಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಅವಕಾಶ ಕೇಳಿದ್ದೇನೆ. ಅವಕಾಶ ಸಿಕ್ಕರೆ ರಾಜ್ಯದ ಕೆಲವು ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಡಿಸಿಎಂ ಸಂಬಂಧ ನಾನು ಚರ್ಚೆ ಮಾಡಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *