ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಜೂನಿಯರ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ನಾಳೆ ಅಂದರೆ ಜುಲೈ 1 ರಂದು ಎನ್ಸಿಎ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಸದ್ಯ ಟೀಂ ಇಂಡಿಯಾ ಎ ಹಾಗೂ ಅಂಡರ್ 19 ತಂಡದ ಕೋಚ್ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದು, ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ಎನ್ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದರಿಂದ ಕೋಚ್ ಹುದ್ದೆಯಿಂದ ಬಿಡುಗಡೆ ಆಗಲಿದ್ದಾರೆ ಎನ್ನಲಾಗಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಎನ್ಸಿಎ ಭಾರತ ಕ್ರಿಕೆಟ್ ತಂಡ ಮಹತ್ವದ ಭಾಗವಾಗಿದ್ದು, ಈ ಕೇಂದ್ರದಲ್ಲಿ ವಲಯವಾರು ಕ್ರಿಕೆಟ್ ಅಕಾಡೆಮಿ ತರಬೇತಿದಾರರನ್ನು ನೇಮಿಸುವುದು, ಮಹಿಳಾ ತಂಡದ ಅಭಿವೃದ್ಧಿ, ಗಾಯಗೊಂಡಿರುವ ಆಟಗಾರರ ಚೇತರಿಸಿಕೊಳ್ಳುವ ಮೇಲೆ ಹೆಚ್ಚಿನ ನಿಗಾವಹಿಸುವ ಕಾರ್ಯವನ್ನು ಮಾಡಲಿದೆ.
ರಾಹುಲ್ ದ್ರಾವಿಡ್ ಅವರ ತರಬೇತಿಯಲ್ಲಿ ಟೀಂ ಇಂಡಿಯಾ ಎ ತಂಡ ಹಾಗೂ ಅಂಡರ್ 19 ತಂಡಗಳು ಉತ್ತಮ ಪ್ರದರ್ಶನವನ್ನು ತೋರಿದೆ. ಯುವ ಉದಯೋನ್ಮುಖ ಕ್ರಿಕೆಟರ್ ಗಳಿಗೆ ಉತ್ತಮ ತರಬೇತಿ ನೀಡಿದ್ದರು. ರಾಹುಲ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಯುವ ಪ್ರತಿಭೆಗಳು ರಾಷ್ಟ್ರೀಯ ತಂಡದಲ್ಲಿ ಮಿಂಚುಹರಿಸಿದ್ದಾರೆ.