ಬೆಂಗಳೂರು: ಬೇರೆಯವರ ಬೆಂಬಲವಿಲ್ಲದೇ ಮೋದಿಯವರು ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದ್ರೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ ನಂತರದ ಘಟನೆಯನ್ನು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಮಾಧ್ಯಮಗಳ ಜೊತೆಗಿನ ಸಂವಾದದಲ್ಲಿ ಮೆಲುಕು ಹಾಕಿದ್ದಾರೆ.
ಮೋದಿಯವರು ಚಿಕ್ಕಬಳ್ಳಾಪುರಕ್ಕೆ ಬಂದಾಗ, ನಮ್ಮ ರಾಜ್ಯಕ್ಕೆ ಬರಲಿ. ನಾನೇ ಎಚ್ಡಿಡಿ ಅವರನ್ನು ಕಾಪಾಡಿಕೊಳ್ಳುತ್ತೇನೆ ಅಂತ ಹೇಳಿದ್ದರು. ಆವಾಗ ನಾನು ಅವರ ಮಾತಿಗೆ ಪ್ರತಿಕ್ರಿಯೆ ನೀಡಿ, ನನಗೆ 4 ಜನ ಮಕ್ಕಳಿದ್ದಾರೆ. ಅವರು ಕಾಪಾಡುವುದು ಬೇಕಾಗಿಲ್ಲ. ಇವರಿಗೆ ಯಾಕ್ ಬೇಕು ಅಂತ ತಮಾಷೆಯಾಗಿ ಹೇಳಿದ್ದೆ.
ಸವಾಲಿನಂತೆಯೇ ಚುನಾವಣೆಯಲ್ಲಿ ಗೆದ್ದು ಸರ್ಕಾರ ಅಧಿಕಾರಕ್ಕೆ ಬಂದ 4 ದಿನ ಆದ ಬಳಿಕ ನಾನು ಮೋದಿಯವರನ್ನು ಭೇಟಿ ಮಾಡಿದೆ. ಈ ವೇಳೆ ನಾನು ಈಗಾಗಲೇ ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಮಾತು ಕೊಟ್ಟಿದ್ದೆ. ಈ ಮಾತನ್ನು 10 ಬಾರಿ ಹೇಳಿದ್ದೇನೆ. ಹೀಗಾಗಿ ಸವಾಲಿನಂತೆ ನಾನು ರಾಜೀನಾಮೆ ನೀಡಲು ಬಂದಿದ್ದೇನೆ ಅಂತ ಹೇಳಿದೆ. ಇದನ್ನೂ ಓದಿ: ಕನ್ನಡಿಗ ಪ್ರಧಾನಿಯಾದ್ರೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿಗಿಲ್ಲ- ಮೋದಿಯನ್ನು ಹೊಗಳಿ ಸಿಎಂ ತೆಗಳಿದ ಮಾಜಿ ಪ್ರಧಾನಿ
ಆ ಸಂದರ್ಭದಲ್ಲಿ ಮೋದಿಯವರು ನೀವೊಬ್ಬರು ಅನುಭವಸ್ಥರು. ಚುನಾವಣೆ ಸಂದರ್ಭದಲ್ಲಿ ನಾನೂ ಮಾತಾಡಿದ್ದೇನೆ. ನೀವೂ ಮಾತಾಡಿದ್ದೀರಿ. ಅದನ್ನೆಲ್ಲಾ ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಚುನಾವಣೆ ಸಂದರ್ಭದಲ್ಲಿ ನೀವು ತೆಗೆದುಕೊಂಡಿರೋ ಮೃದು ನಿರ್ಧಾರ ನನಗೆ ಬೇಸರ ತಂದಿದೆ. ನಿಮಗೆ ಅನುಭವವಿದೆ. 10 ವರ್ಷ ರಾಜ್ಯವಾಳಿದ್ದೀರಿ. ಹಿರಿಯರಿದ್ದೀರಿ. ನಿಮ್ಮ ಮನಸ್ಸಿಗೆ ಬೇಸರವಾಗಿ ಆಕ್ರೋಶದ ಈ ರಾಜೀನಾಮೆಯನ್ನು ನೀಡುವ ಅವಶ್ಯಕತೆಯಿಲ್ಲ ಅಂತ ಅವರೇ ನನ್ನಲ್ಲಿ ವಿನಂತಿ ಮಾಡಿಕೊಂಡರು ಅಂತ ಹೇಳಿದ್ರು.
ಸುಮಾರು 15-20 ನಿಮಿಷ ಮಾತುಕತೆ ನಡೆಸಿದೆವು. ಇದು ಅವರೊಂದಿಗೆ ನನ್ನ ಮೊದಲ ಮೀಟಿಂಗ್ ಆಗಿತ್ತು ಅಂತ 2014ರ ಘಟನೆಯನ್ನು ಎಚ್ಡಿಡಿ ನೆನಪಿಸಿಕೊಂಡರು.