ಎಚ್‍ಡಿಡಿ ಕುಟುಂಬದ ಸೇಡಿನ ರಾಜಕೀಯಕ್ಕೆ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ – ರಾಜಣ್ಣ ಕಿಡಿ

Public TV
2 Min Read

ತುಮಕೂರು: ತುಮಕೂರು ಡಿಸಿಸಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸೋಲಿನ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಕುರಿತು ಕ್ಯಾತಸಂದ್ರದ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿ.ವಿ ಜೊತೆ ಮಾತನಾಡಿದ ಅವರು, ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ತಾವು ಸೋತಿದ್ದರಿಂದ ಈ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಅವರ ಕುಟುಂಬ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಇದರಿಂದ ನಾನು ಕುಗ್ಗಲ್ಲ. ಮತ್ತೇ ಒಂದು ವಾರದಲ್ಲಿ ಅಧಿಕಾರಕ್ಕೆ ಬರುತ್ತೇನೆ. ನನ್ನ ಮೇಲೆ ಯಾವುದೇ ಅವ್ಯವಹಾರದ ಆರೋಪಗಳಿಲ್ಲ. ಸೂಪರ್ ಸೀಡ್ ಕುರಿತು ಯಾವುದೇ ನೋಟೀಸ್ ನೀಡಿಲ್ಲ. ಏಕಾಏಕಿ ಸೂಪರ್ ಸೀಡ್ ಮಾಡಿದ್ದಾರೆ ಎಂದು ರಾಜಣ್ಣ ಕಿಡಿ ಕಾರಿದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಸಚಿವ ರೇವಣ್ಣ ಅವರ ಅವ್ಯಹಾರವನ್ನು ಕೆಲವೇ ದಿನಗಳಲ್ಲಿ ಬಿಚ್ಚಿಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ನಾನೊಬ್ಬನೇ ಕಾರಣ ಎನ್ನುವುದು ಸುಳ್ಳು. ಜಿಲ್ಲೆಯ ಬೇರೆ ನಾಯಕರೂ ದೇವೇಗೌಡರ ಸೋಲಿಗೆ ಕಾರಣರಾಗಿದ್ದಾರೆ. ಸೋಮವಾರ ಸಂಜೆ ಈ ಸರ್ಕಾರ ಹಾಳಾಗಿ ಹೋಗಲಿದ್ದು, ಮಂಗಳವಾರ ಅಥವಾ ಬುಧವಾರದೊಳಗೆ ನಾನು ಮತ್ತೆ ಅಧಿಕಾರ ಹಿಡಿಯುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ನನಗೆ ಇದೇನು ಹೊಸದಲ್ಲಿ ಕಳೆದ 50 ವರ್ಷಗಳಿಂದ ಸಹಕಾರ ವಲಯದಲ್ಲಿ ಕೆಲಸ ಮಾಡಿದ್ದೇನೆ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು, ದೇವೇಗೌಡರ ಕುಟುಂಬ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಈ ರೀತಿ ಮಾಡಿದ್ದಾರೆ. ಹಣಕಾಸು ಸಂಸ್ಥೆಗಳಲ್ಲಿ ಯಾವುದೇ ರೀತಿ ಆರೋಪ ಬಂದಲ್ಲಿ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಬೇಕು. ಬ್ಯಾಂಕ್‍ನಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ. ಕೆಲವೇ ದಿನಗಳಲ್ಲಿ ಡಿಸಿಎಂ, ಎಚ್‍ಡಿಡಿ, ರೇವಣ್ಣ ಅವರ ಹಗರಣವನ್ನು ದಾಖಲೆ ಸಮೇತ ಬಿಚ್ಚಿಡುತ್ತೇನೆ.

ಸೋಮವಾರ ಸರ್ಕಾರ ಹಾಳಾಗಿ ಹೋಗುತ್ತದೆ. ನಾನು ಸುಪ್ರೀಂ ಕೋರ್ಟ್‍ಗೆ ಈ ಕುರಿತು ಅರ್ಜಿ ಹಾಕುತ್ತೇನೆ. ನಂತರ ನಾನೇ ಅಧಿಕಾರಕ್ಕೆ ಬರುತ್ತೇನೆ ಎಂದು ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2003 ರಿಂದ ಮಾಜಿ ಶಾಸಕ ರಾಜಣ್ಣ ಸತತ 5 ವರ್ಷಗಳ ಡಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ ಪ್ರಸಾದ್ ಉಪಾಧ್ಯಕ್ಷರಾಗಿದ್ದರೂ ರಾಜಣ್ಣ ಅವರು ಬ್ಯಾಂಕಿನಲ್ಲಿ ಹಿಡಿತ ಹೊಂದಿದ್ದರು. ಡಿಸಿಸಿ ಬ್ಯಾಂಕ್ ಈ ರೀತಿ ಸೂಪರ್ ಸೀಡ್ ಆಗುವುದು ಇದೇ ಮೊದಲಲ್ಲ. 2004ರಲ್ಲೂ ಸೂಪರ್ ಸೀಡ್ ಆಗಿತ್ತು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ರಾಜಣ್ಣ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದರು. ಕಾಂಗ್ರೆಸ್ ಉಳಿಯಬೇಕಾದರೆ ಜೆಡಿಎಸ್‍ನಿಂದ ಹೊರ ಬರಬೇಕು ಎಂದು ಹೇಳಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋಲಲು ರಾಜಣ್ಣ ನೀಡಿದ ಹೇಳಿಕೆಗಳು ಕಾರಣ ಎನ್ನುವ ವಿಚಾರ ಚರ್ಚೆಯಾಗಿತ್ತು. ಅಷ್ಟೇ ಅಲ್ಲದೇ ಪರಮೇಶ್ವರ್ ವಿರುದ್ಧವೂ ರಾಜಣ್ಣ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿ ಸರ್ಕಾರ ಸೂಪರ್ ಸೀಡ್ ಮಾಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.

 

ವಿಶೇಷ ಏನೆಂದರೆ ಶನಿವಾರ ಬೆಳಗ್ಗೆ ರಾಜಣ್ಣ ಸುದ್ದಿಗೋಷ್ಠಿ ನಡೆಸಿ ಸಿಎಂ, ದೇವೇಗೌಡರ ವಿರುದ್ಧ ಗುಡುಗಿದ್ದರು. ಆದರೆ ಸಂಜೆ 5 ಗಂಟೆಯ ವೇಳೆಗೆ ಪೊಲೀಸರು ಭದ್ರತೆಗಾಗಿ ಡಿಸಿಸಿ ಬ್ಯಾಂಕಿಗೆ ನಿಯೋಜನೆ ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *