ಸಂಕಷ್ಟ ನಿವಾರಣೆಗಾಗಿ ಗಾಣಗಾಪುರದ ದತ್ತನ ಮೊರೆ ಹೋದ ರೇವಣ್ಣ

Public TV
2 Min Read

– ದತ್ತನ ನಿರ್ಗುಣ ಪಾದುಕೆಗಳಿಗೆ ರೇವಣ್ಣ ವಿಶೇಷ ಪೂಜೆ

ಕಲಬುರಗಿ: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಬಂಧನವಾಗಿ ಜಾಮೀನು ಮೇಲೆ ಬಂದಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಟೆಂಪಲ್ ರನ್ ಮುಂದುವರಿಸಿದ್ದಾರೆ. ಸಂಕಷ್ಟ ನಿವಾರಣೆಗಾಗಿ ಇಂದು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ (Ganagapur) ದತ್ತನ (Dattatreya Temple) ಮೊರೆ ಹೋಗಿದ್ದಾರೆ.

ಇಂದು ಬೆಳಗ್ಗೆ 9:30ಕ್ಕೆ ಬೆಂಗಳೂರಿನಿಂದ ಕಲಬುರಗಿ (Kalaburagi) ವಿಮಾನ ನಿಲ್ದಾಣಕ್ಕೆ ಆಗಮಿಸಿದ ರೇವಣ್ಣ, ಬಳಿಕ ರಸ್ತೆ ಮೂಲಕ ಗಾಣಗಾಪುರಕ್ಕೆ ತೆರಳಿದರು. ಈ ವೇಳೆ ದೇವಸ್ಥಾನದಲ್ಲಿ ದತ್ತನ ನಿರ್ಗುಣ ಪಾದುಕೆಗಳಿಗೆ ರೇವಣ್ಣ ವಿಶೇಷ ಪೂಜೆ ಸಲ್ಲಿಸಿ, ಎದುರಾಗಿರೋ ಸಂಕಷ್ಟಗಳನ್ನ ನಿವಾರಿಸು ಸ್ವಾಮಿ ಎಂದು ಪ್ರಾರ್ಥಿಸಿದರು. ಒಂದು ಗಂಟೆಗಳ ಕಾಲ ದೇವಸ್ಥಾನದಲ್ಲಿ ಕಾಲ ಕಳೆದ ರೇವಣ್ಣ ಅವರಿಗೆ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸತ್ಕರಿಸಲಾಯಿತು. ಇನ್ನೂ ಇದಕ್ಕೂ ಮುನ್ನ ಏರ್‌ಪೋರ್ಟ್‌ನಲ್ಲಿ ಹೆಚ್‌ಡಿ ರೇವಣ್ಣ ಜೊತೆ ಸಾರ್ವಜನಿಕರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಪಟ್ಟರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಲು ರೇವಣ್ಣ ನಿರಾಕರಿಸಿ ದಯವಿಟ್ಟು ನನ್ನನ್ನ ಬಿಟ್ಟು ಬಿಡಿ ಬ್ರದರ್ ಎಂದು ಹೇಳಿದರು. ಇದನ್ನೂ ಓದಿ: ಯಾದಗಿರಿಯಲ್ಲಿ ವಿಪರೀತ ಬಿಸಿಲಿನಿಂದ ಮೀನುಗಳ ಮಾರಣಹೋಮ

ಈ ಹಿಂದೆ ಕೂಡ ಅನೇಕ ಬಾರಿ ಸಂಕಷ್ಟ ಎದುರಾಗಿದ್ದಾಗ ಹೆಚ್‌ಡಿ ರೇವಣ್ಣ ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು. ಪ್ರಜ್ವಲ್ ರೇವಣ್ಣರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಏರ್‌ಪೋರ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗೋವರೆಗೂ ಕತ್ತೆ ಕಾಯ್ತಿದ್ರ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಹೊರದೇಶಕ್ಕೆ ಹೋದವರನ್ನು ಕರೆತರಲು ಅದರದ್ದೇ ಆದ ರೀತಿ ಇದ್ದು, ಡಿಪ್ಲೊಮೆಟಿಕ್ ಪಾಸ್‌ಪೋರ್ಟ್ ರದ್ದುಪಡಿಸಲು ಸಹ ಅದರದ್ದೇ ಆದ ಪ್ರಕ್ರಿಯೆಗಳಿವೆಯೆಂದು ಹೇಳಿದರು. ಪ್ರಜ್ವಲ್ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದ್ದು, ಪ್ರಜ್ವಲ್ ತಪ್ಪು ಮಾಡಿದ್ದೇ ಆದಲ್ಲಿ ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಕೊಡುಗೆ

Share This Article