ಜಂತಕಲ್ ಕೇಸ್: ಆರೋಪ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ತೀನಿ: ಎಚ್‍ಡಿಕೆ

Public TV
2 Min Read

ಬೆಂಗಳೂರು: ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡ(ಎಸ್‍ಐಟಿ) ಸುಪ್ರೀಂ ಕೋರ್ಟಿ ಗೆ ಸಲ್ಲಿಸಿದ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಈ ಕೇಸ್ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ನಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ನನ್ನ ಹೆಸರಿಗೆ ಕಳಂಕ ತರಲು ಈ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಎಸ್‍ಐಟಿ ಮುಂದೆ ಇಡೀ ದಿನ ಹೋಗಿ ಕುಳಿತುಕೊಳ್ಳುತ್ತೇನೆ. ಏನು ಬೇಕಾದರೂ ವಿಚಾರಣೆ ಮಾಡಿಕೊಳ್ಳಲಿ. ನಾನು ಪ್ರಾಮಾಣಿಕವಾಗಿ ಇರುವುದರಿಂದಲೇ ಧೈರ್ಯವಾಗಿ ಇದ್ದೇನೆ ಎಂದು ತಿಳಿಸಿದರು.

ರಾಹುಲ್‍ಗೆ ಕ್ರೆಡಿಟ್: ಸಿದ್ದರಾಮಯ್ಯನವರು ಸಾಲ ಮನ್ನಾವನ್ನು ನಾನು ನನ್ನ ಕ್ರೆಡಿಟ್ ಎಂದು ಹೇಳುವುದಿಲ್ಲ. 50 ಸಾವಿರ ರೂ. ವರೆಗಿನ ಸಾಲಮನ್ನಾದ ಕ್ರೆಡಿಟ್ ಅನ್ನು ನಾನು ರಾಹುಲ್ ಗಾಂಧಿ ಅವರಿಗೆ ಕೊಡುತ್ತೇನೆ. ಬಿಎಸ್‍ವೈ ಗೆ ಸಾಲ ಮನ್ನಾದ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿಲ್ಲ. ಶೆಟ್ಟರ್ ಅವರು ಸಾಲ ಮನ್ನಾ ಮಾಡುವಾಗ ಬಿಎಸ್‍ವೈ ಬಿಜೆಪಿ ಪಕ್ಷ ದಿಂದ ಒಂದು ಕಾಲು ಹೊರಗಡೆ ಇಟ್ಟಿದ್ದರು ಎಂದರು.

ರೈತರ ದುಡ್ಡು: ಸಾಲ ಮನ್ನಾ ಮಡುವ ಮೂಲಕ ರೈತನ ದುಡ್ಡು ರೈತನಿಗೆ ಕೊಟ್ಟಿದ್ದಾರೆ. ನಾಲ್ಕು ವರ್ಷಗಳಿಂದ ಸಂಗ್ರಹಿರುವ ವ್ಯಾಟ್ ತೆರಿಗೆಯ ಹಣ ಕೊಟ್ಟಿದ್ದಾರೆ. ಸಾಲ ಮನ್ನಾ ಆದೇಶ ಹೊರಬರುವುದಕ್ಕೂ ಒಂದೆರಡು ದಿನ ಮೊದಲು ಬ್ಯಾಂಕಿನವರು ಅನೇಕ ರೈರಿಗೆ ಧಮ್ಕಿ ಹಾಕಿ ಕಟ್ಟಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ ಕೆಲ್ಸ: ಚುನಾವಣೆಯ ಹತ್ತಿರ ಬರುತ್ತಿರುವ ಕಾರಣ ಕಾಂಗ್ರೆಸ್ ಎಂಎಲ್‍ಸಿ ಗೋವಿಂದರಾಜು ಐಟಿ ಡೈರಿಯ ಸುದ್ದಿಗಳು ಹೊರಗಡೆ ಬರುತ್ತಿವೆ. ಸಾಲ ಮನ್ನಾ ವಿಚಾರವನ್ನು ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಈ ತಂತ್ರವನ್ನು ಮಾಡಿಸುತ್ತಿದ್ದಾರೆ ಎಂದು ಎಚ್‍ಡಿಕೆ ಹೇಳಿದರು.

ಗಂಭೀರವಾಗಿ ತೆಗೆದುಕೊಳ್ಳಬೇಕು: ಮೆಟ್ರೋ ಸ್ಟೇಷನ್ ಗಳಲ್ಲಿ ಹಿಂದಿ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಕ್ಷಣ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕಾರಿಗಳಿಗೆ ಸೂಚನೆ ಕೊಟ್ಟು ಕನ್ನಡಕ್ಕೆ ಪ್ರಾಶಸ್ತ್ಯ ನೀಡಲು ಹೇಳಬೇಕು. ಇದು ಹಂತಹಂತವಾಗಿ ಬೇರೆ ಭಾಷೆಗಳನ್ನು ಹೇರುವ ಪ್ರಯತ್ನ ಎಂದು ಎಚ್‍ಡಿಕೆ ಹೇಳಿದರು.

ಇಬ್ಬರೇ ಸ್ಪರ್ಧೆ: ಪ್ರಜ್ವಲ್ ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿಗೆ, ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಎನ್ನುವ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಅವರಿಬ್ಬರೂ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ನನ್ನ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ಜಂತಕಲ್ ಮೈನಿಂಗ್ ಅಕ್ರಮದಲ್ಲಿ ಕುಮಾರಸ್ವಾಮಿ ಪಾತ್ರ ಇದೆ: ಸುಪ್ರೀಂಗೆ ಎಸ್‍ಐಟಿ

Share This Article
Leave a Comment

Leave a Reply

Your email address will not be published. Required fields are marked *